ಮುಲಾರಪಟ್ನ ಸೇತುವೆಯ ಅವಶೇಷಗಳ ತೆರವು ಕಾರ್ಯ ಆರಂಭ
ಬಂಟ್ವಾಳ, ನ. 11: ಮುರಿದು ಬಿದ್ದಿರುವ ಮುಲಾರಪಟ್ನ ಸೇತುವೆಯ ಮರುನಿರ್ಮಾಣದ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಮುರಿದು ಬಿದ್ದು ಉಳಿದಿರುವ ಸೇತುವೆಯ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಸೋಮವಾರ ಆರಂಭಿಸಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ, ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬಳಿಕ ಮಾತನಾಡಿದ ಶಾಸಕರು, ಸೇತುವೆ ಮುರಿದು ಬಿದ್ದು ಈ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಡಿಸೆಂಬರ್ನಲ್ಲಿ ಟೆಂಡರು ಕರೆಯುವ ಸಾಧ್ಯತೆ ಇದೆ. ಹಿಂದೆ ಟೆಂಡರ್ ಆಗಿದೆ ಎಂದು ಹೇಳಳಾಗಿದ್ದು, ಈ ಕುರಿತು ತಾನು ಹಾಗೂ ಶಾಸಕ ಭರತ್ ಶೆಟ್ಟಿ ಅವರು ಲೋಕೋಪಯೋಗಿ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿಚಾರ ತಿಳಿಸಿದ್ದು, ೧೪.೫೦ ಕೋ.ರೂ.ಅನುದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಅದರ ವಿಳಂಬದ ಹಿನ್ನೆಲೆಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಇಬ್ಬರು ಕೂಡ ತಲಾ ೨ ಕೋ.ರೂ.ಗಳನ್ನು ಮೀಸಲಿಟ್ಟಿದ್ದೇವೆ. ಹೀಗಾಗಿ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಹೊಸ ಸೇತುವೆಯನ್ನು ಕಟ್ಟಬೇಕಾದರೆ ಅಲೈನ್ಮೆಂಟ್ ಕಾರ್ಯ ಆಗಬೇಕಿದ್ದು, ಹೀಗಾಗಿ ಹಳೆಯ ಸೇತುವೆಯ ಉಳಿಕೆ ಭಾಗವನ್ನು ಲೋಕೋಪಯೋಗಿ ಇಲಾಖೆ ತೆರವು ಕಾರ್ಯ ಆರಂಭಿಸಿದೆ. ಈ ಕಾರ್ಯ ಬಹಳ ಎಚ್ಚರಿಕೆಯಿಂದ ನಡೆಯಬೇಕಿದ್ದು, ಹೀಗಾಗಿ ಒಂದು ತಿಂಗಳವರೆಗೆ ನಡೆಯುವ ಸಾಧ್ಯತೆ ಇದೆ ಎಂದು ಎಂಜಿನಿಯರ್ಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆಯ ಸೆಕ್ಷನ್ ಅಧಿಕಾರಿ ಸಂಜೀವ್ಕುಮಾರ್, ಎಇಇ ಚಂದ್ರಶೇಖರ್ ಉಪಸ್ಥಿತರಿದ್ದರು.