ಬೆಳ್ತಂಗಡಿ: ಗಾಂಧಿ ಸಂಕಲ್ಪ ಯಾತ್ರೆ ಸಮಾರೋಪ

Update: 2019-11-11 18:51 GMT

ಬೆಳ್ತಂಗಡಿ: ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದ ಮಹಾತ್ಮ ಗಾಂಧೀಜಿವರು ಸ್ವದೇಶಿ ಚಿಂತನೆ ಮತ್ತು ದುಶ್ಚಟಮುಕ್ತ ಸಮಾಜವನ್ನು ಬಯಸಿದವರು. ಅಂತಹ ರಾಷ್ಟ್ರಪಿತನ ಸಂಕಲ್ಪ ಯಾತ್ರೆಗೆ ಯುವಸಮುದಾಯ ಮುಂದೆ ಬಂದಿದೆ ಎಂದರೆ ಮುಂದಿನ ದಿನಗಳಲ್ಲಿ ಗಾಂಧಿ ಆದರ್ಶದಲ್ಲಿ ಜಗತ್ತಿಗೆ ನಂ.1ದೇಶ ಭಾರತವಾಗಲು ಸಾಧ್ಯ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಅವರು ಸೋಮವಾರ ಗಾಂಧಿ ಸಂಕಲ್ಪ ಯಾತ್ರೆ ಸಮಿತಿ ತಾಲೂಕಿನಾದ್ಯಂತ ಹಮ್ಮಿಕೊಂಡ ಗಾಂಧಿ ಸಂಕಲ್ಪ ಯಾತ್ರೆ ಜೊತೆಯಾಗಿ ನವಭಾರತ ಕಟ್ಟೋಣ, ಬನ್ನಿ ನಡೆಯೋಣ ಗಾಂಧಿ ಮಾರ್ಗದಲ್ಲಿ ಎಂಬ ಕಾರ್ಯಕ್ರಮದ ಸಮಾರೋಪದ ಪ್ರಯುಕ್ತ ಬೆಳ್ತಂಗಡಿ ಮಿನಿ ವಿಧಾನಸೌಧದಿಂದ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದವರೆಗೆ ನಡೆದ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.  ಯಾವುದೇ ದೇಶದ ಮತ, ಧರ್ಮದ ಮೇಲೆ ಅತಿಕ್ರಮಣ ಮಾಡದ ದೇಶ ಭಾರತ. ಮಹಾತ್ಮ ಗಾಂಧೀಜಿಯವರು ಅಹಿಂಸಾ ಹೋರಾಟ, ಸತ್ಯಾಗ್ರಹದ ಮೂಲಕ ಮಾತ್ರ ಗೆಲುವನ್ನು ಸಾಧಿಸಬಹುದು ಎಂಬ ಚಿಂತನೆಯೊಂದಿಗೆ ಹಿಂದೂ ಮುಸ್ಲಿಮರನ್ನು ಒಗ್ಗೂಡಿಸಿ ಉಪ್ಪಿನ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವ ಮೂಲಕ ಸ್ವಾತಂತ್ರ್ಯದ ಗೆಲುವನ್ನು ಕಂಡರು. ಇದು ನಿಜವಾದ ರಾಷ್ಟ್ರಪಿತನ ಕನಸು. ಗಾಂಧೀಜಿಯವರು ಕೇವಲ ವ್ಯಕ್ತಿಯಲ್ಲಿ ಅವರೊಂದು ವಿಚಾರಧಾರೆ. ಅವರ ಬದುಕೇ ತ್ಯಾಗಮಯ ಬದುಕು. ಗ್ರಾಮಸ್ವರಾಜ್ಯ ಮಾಡುವುದಲ್ಲದೆ ಕಲಂಕ ರಹಿತ ಸಮಾಜವನ್ನು ರೂಪಿಸಿದ ಮಹಾತ್ಮ ಗಾಂಧೀಜಿಯವರ ಚಿಂತನೆಯನ್ನು ಪ್ರತಿಯೊಬ್ಬ ಯುವಸಮುದಾಯವು ಅಳವಡಿಸಿ ಬೆಳೆಸಬೇಕು ಎಂದರು.

ಶಾಸಕ ಹರೀಶ್ ಪೂಂಜಾ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯ ನ್ಯಾಯವಾದಿ ಪ್ರತಾಪ್‍ಸಿಂಹ ನಾಯಕ್ ಮಾತನಾಡಿ ಶುಭ ಹಾರೈಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್  ಸ್ವಾಗತಿಸಿದರು. ಶ್ರೀನಿವಾಸ ಧರ್ಮಸ್ಥಳ ಮತ್ತು ಸೀತಾರಾಮ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ನಡಿಗೆಯಲ್ಲಿ ವಿವಿಧ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News