ರಸ್ತೆ ಅಪಘಾತ : ಗಾಯಾಳು ಮಾಜಿ ಗ್ರಾಪಂ ಸದಸ್ಯ ಮೃತ್ಯು

Update: 2019-11-14 14:16 GMT

ಬಂಟ್ವಾಳ, ನ. 14: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗ್ರಾಪಂ ಮಾಜಿ ಸದಸ್ಯರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಪುಂಜಾಲಕಟ್ಟೆ ನಿವಾಸಿ, ದಿ.ಬಾಬು ಆಚಾರ್ಯ ಎಂಬವರ ಪುತ್ರ, ಮಡಂತ್ಯಾರು ಗ್ರಾಪಂ ಮಾಜಿ ಸದಸ್ಯ, ಪುಂಜಾಲಕಟ್ಟೆ ಅರ್ಚನಾ ಜುವೆಲ್ಲರ್ಸ್ ಮಾಲಕ ದಿನೇಶ್ ಆಚಾರ್ಯ(54) ಮೃತಪಟ್ಟವರು.

ನ.6 ರಂದು ಮಂಗಳೂರು ಅಡ್ಯಾರು ಬಳಿ ನಡೆದ ಬೈಕ್ ಮತ್ತು ಗೂಡ್ಸ್ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಅವರು ವಿದೇಶದಲ್ಲಿನ ಉದ್ಯೋಗ ತೊರೆದು ಪುಂಜಾಲಕಟ್ಟೆಯಲ್ಲಿ ಚಿನ್ನದ ಕುಸುರಿ ವೃತ್ತಿ ನಡೆಸುತ್ತಿದ್ದ ಅವರು, ಕಳೆದ ಅವಧಿಯಲ್ಲಿ ಮಡಂತ್ಯಾರು ಗ್ರಾಪಂ ಹಾಗೂ ಪುಂಜಾಲಕಟ್ಟೆ ಸ.ಪ್ರ.ದ.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದರು. ದ.ಕ.ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿಯ ಕಾರ್ಯದರ್ಶಿಯಾಗಿದ್ದ ಇವರು, ಉತ್ತಮ ಕ್ರಿಕೆಟ್ ಆಟಗಾರರಾಗಿದ್ದ ಸ್ಥಳೀಯ ರಿಲಯನ್ಸ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜ, ಹರೀಶ್ ಕುಮಾರ್ ಬೆಳ್ತಂಗಡಿ, ಮಾಜಿ ಶಾಸಕ ವಸಂತ ಬಂಗೇರ, ಜಿಪಂ ಸದಸ್ಯ ಬಿ.ಪದ್ಮಶೇಖರ ಜೈನ್ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News