ಪಂಪ್ವೆಲ್ ಮೇಲ್ಸೇತುವೆ ಉದ್ಘಾಟನೆಗೆ ಮತ್ತೊಂದು ಗಡುವು !

Update: 2019-11-16 12:28 GMT

ಮಂಗಳೂರು, ಜ.16: ಐತಿಹಾಸಕ ತಾಣವೆಂಬ ಕುಖ್ಯಾತಿಗೆ ಕಾರಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗಿರುವ ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆಗೆ ಮತ್ತೊಂದು ಗಡುವು ದೊರಕಿದೆ!

ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸುವ ಸಲುವಾಗಿ ಇಂದು ಅಲ್ಲಿಗೆ ಭೇಟಿ ನೀಡಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರ ಜತೆ ಮಾತನಾಡಿ, 2019ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವುದಾಗಿ ಹೆದ್ದಾರಿ ಅಧಿಕಾರಿಗಳು ಹಾಗೂ ಗುತ್ತಿಗೆ ವಹಿಸಿರುವ ನವಯುಗ್ ಸಂಸ್ಥೆ ತಿಳಿಸಿದೆ. ಹಾಗಾಗಿ ಜನವರಿ ಮೊದಲ ವಾರದಲ್ಲಿ ಪಂಪ್‌ವೆಲ್ ಮೇಲ್ಸೇತುವೆ ಯನ್ನು ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದರು.

ಈಗಾಗಲೇ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೇ. 95ರಷ್ಟು ಮುಗಿದು ವಾಹನ ಸಂಚಾರಕ್ಕೆ ಯೋಗ್ಯ ಆಗಿದೆ. ಇದರ ನಡುವಿನ ಮಂಗಳೂರು ಲೋಕಸಭಾ ವಿಭಾಗಕ್ಕೊಳಪಟ್ಟ ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಕಾನೂನುನಾತ್ಮಕ, ಆಡಳಿತಾತ್ಮಕ ಹಾಗೂ ವ್ಯಾವಹಾರಿಕ ಸಮಸ್ಯೆಯಿಂದ ನಿಧಾನಗತಿಯಲ್ಲಿ ಸಾಗಿತ್ತು. ಕಳೆದ ಬಾರಿ ಒತ್ತಡ ಹೇರಿ ತೊಕ್ಕೊಟ್ಟು ಕಾಮಗಾರಿ ಮುಗಿಸಲಾಗಿದೆ. ಕಳೆದ ಜನವರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರ್ಯದರ್ಶಿ ಭೇಟಿ ನೀಡಿದ್ದ ವೇಳೆ ಗುತ್ತಿಗೆ ವಹಿಸಿದ ಸಂಸ್ಥೆ ಅನುದಾನದ ಕೊರತೆ ಬಗ್ಗೆ ತಿಳಿಸಿದ್ದರು. ಆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಬ್ಯಾಂಕರ್ ಜತೆ ಮಾತನಾಡಿ ಸಾಲ ಹಾಗೂ ಸರಕಾರದ ಕಡೆಯಿಂದ ಹೆಚ್ಚುವರಿ ಕೆಲಸಕ್ಕೆ ಅನುದಾನ ಒದಗಿಸಲಾಗಿತ್ತು. ಇದೇ ವೇಳೆ ಇಂಡಿಯಾನ ಆಸ್ಪತ್ರೆಯಿಂದ ಫಾದರ್ ಮುಲ್ಲರ್ ಸಭಾಂಗಣಕ್ಕೆ ಹೋಗುವ ಬಳಿ ಅಂಡರ್ ಪಾಸ್ ಬೇಡಿಕೆಯ ಮೇರೆಗೆ ಕಳೆದ ವರ್ಷ ಅನುಮತಿ ದೊರಕಿ ಅದನ್ನು ಮಾಡುವ ಅನಿವಾರ್ಯತೆ ಎದುರಾಯಿತು. ಅದೀಗ ಪೂರ್ಣಗೊಂಡಿದೆ. ಹಾಗಾಗಿ ಕಾಮಗಾರಿ ವೇಗ ಪಡೆದು ಈ ವರ್ಷ ಮುಗಿಸಬೇಕೆಂಬ ಒತ್ತಡ ಹೇರಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಹೆದ್ದಾರಿ ಪ್ರಾಧಿಕಾರ ಜತೆ ಮೂರು ಬಾರಿ ಸಭೆ ನಡೆದಿದೆ. ಮಳೆ ಇದ್ದ ಕಾರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಇದೀಗ ಮತ್ತೆ ವೇಗ ಪಡೆದಿದೆ. ಇಂದು ಕೂಡಾ ಸಭೆ ನಡೆದಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.

ಮೇಲ್ಸೇತುವೆಯ ಇಕ್ಕೆಲಗಳೂ ಅಗಲ

ಮೇಲ್ಸೇತುವೆಯ ಇಕ್ಕೆಲಗಳೂ ತಲಾ 20 ಮೀಟರ್ ಅಳತೆಯಲ್ಲಿ ಅಗಲಗೊಳ್ಳಲಿದೆ. ಸದ್ಯ ಮೇಲ್ಸೇತುವೆ ಕಾಮಗಾರಿ ಮುಗಿದ ಬಳಿಕ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.

ಬುಧವಾರದಿಂದ ಮೇಲ್ಸೇತುವೆಯ ಇಕ್ಕೆಲ ರಸ್ತೆಗಳಿಗೆ ಪ್ಯಾಚ್‌ವರ್ಕ್

ಪಂಪ್‌ವಲ್ ಮೇಲ್ಸೇತುವೆಯ ಇಕ್ಕೆಲಗಳ ರಸ್ತೆಗಳ ಡಾಮರು ಕಿತ್ತು ಹೋಗಿ ವಾಹನ ಸಂಚಾರಕ್ಕೆ ಆಯೋಗ್ಯವಾಗಿದೆ. ಇಂದು ಸ್ಥಳಕ್ಕೆ ಭೇಟಿ ನೀಡಿ ಆ ರಸ್ತೆಯುದ್ದಕ್ಕೂ ಶಾಸಕ ವೇದವ್ಯಾಸ ಕಾಮತ್, ಇತರ ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ನಡೆದುಕೊಂಡು ಹೋದ ಸಂಸದ ನಳಿನ್ ಕುಮಾರ್ ಕಟೀಲ್, ಅಧಿಕಾರಿಗಳಿಗೆ ಬುಧವಾರದಿಂದ ರಸ್ತೆಯ ಡಾಮರೀಕರಣ ನಡೆಸುವಂತೆ ತಾಕೀತು ಮಾಡಿದರು.

ಡಾಮಗಾರಿ ಸಮಯ ಇಕ್ಕೆಲಗಳ ರಸ್ತೆಗಳನ್ನು ಏಕ ಸಮಯದಲ್ಲಿ ಬಂದ್ ಮಾಡದೆ ಒಂದು ರಸ್ತೆಗೆ ಡಾಮರೀಕರಣ ನಡೆಸಿ ಮತ್ತೆ ಇನ್ನೊಂದು ರಸ್ತೆಗೆ ಡಾಮರೀಕರಣ ನಡೆಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಸೂಚಿಸಿದರು.

ಈ ಸಂದರ್ಭ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶು ಮೋಹನ್, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಮಾಜಿ ಕಾರ್ಪೊರೇಟರ್‌ಗಳಾದ ಆಶಾ ಡಿಸಿಲ್ವ, ವಿಜಯ ಕುಮಾರ್ ಶೆಟ್ಟಿ, ನಿಯೋಜಿತ ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು, ಸಂದೀಪ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News