ಬಾಲಕನ ಅಪಹರಣಕ್ಕೆ ಯತ್ನ: ದೂರು
ಶಂಕರನಾರಾಯಣ, ನ.16: ಕಾರಿನಲ್ಲಿ ಬಂದ ಅಪರಿಚಿತರು ಬಾಲಕನನ್ನು ಅಪಹರಿಸಲು ಯತ್ನಿಸಿರುವ ಘಟನೆ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರುಗಡೆ ನ.16ರಂದು ಮಧ್ಯಾಹ್ನ ವೇಳೆ ನಡೆದಿದೆ.
ಬೆಳ್ವೆ ದೇವಸ್ಥಾನಬೆಟ್ಟು ನಿವಾಸಿ ಸುಮತಿ ಪೂಜಾರಿ ಹಾಗೂ ರಾಜೀವ ಪೂಜಾರಿ ದಂಪತಿ ಪುತ್ರ ಹರ್ಷಿತ್ ಪೂಜಾರಿ(12) ಎಂಬಾತ ಇಂದು ಬೆಳಗ್ಗೆ 9:15ರ ವೇಳೆ ಮನೆಯಿಂದ ಬೆಳ್ವೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದನು. ಈ ವೇಳೆ ರಸ್ತೆಯ ಬದಿಯಲ್ಲಿ ನಿಂತಿದ್ದ ಕಡುನೀಲಿ ಬಣ್ಣದ ಓಮಿನಿ ಕಾರಿನಲ್ಲಿ ಇಬ್ಬರು ಅಪರಿಚಿತರು ಹರ್ಷಿತ ಪೂಜಾರಿಯನ್ನು ತಡೆದು ನಿಲ್ಲಿಸಿ ಬರುತ್ತೀಯಾ ಎಂದು ಕೇಳಿದರೆನ್ನಲಾಗಿದೆ.
ಅದಕ್ಕೆ ಹರ್ಷಿತ್ ನಾನು ಬರುವುದಿಲ್ಲ ಎಂದು ತಿಳಿಸಿ ಮುಂದಕ್ಕೆ ಹೋದಾಗ ಕಾರಿನಲ್ಲಿದ್ದ ಓರ್ವ ಆರೋಪಿ ಹರ್ಷಿತನ ಕೆನ್ನೆಗೆ ಹೊಡೆದು ಮುಖಕ್ಕೆ ಯಾವುದೋ ಒಂದು ಸ್ಪ್ರೇ ಸಿಂಪಡಿಸಿ ಅಪಹರಣ ಮಾಡಲು ಪ್ರಯತ್ನಿಸಿರುವು ದಾಗಿ ದೂರಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.