ಭಾರತದಲ್ಲಿ ಆಶ್ರಯ ನೀಡಿ: ಪಾಕಿಸ್ತಾನದ ಎಂಕ್ಯೂಎಂ ಸ್ಥಾಪಕನಿಂದ ಮೋದಿಗೆ ಮನವಿ
ಲಂಡನ್, ನ. 18: “ನನಗೆ ಮತ್ತು ನನ್ನ ಜನರಿಗೆ ಭಾರತದಲ್ಲಿ ಆಶ್ರಯ ನೀಡಿ” ಎಂದು ಬ್ರಿಟನ್ನಲ್ಲಿ ದೇಶಭ್ರಷ್ಟ ಜೀವನವನ್ನು ನಡೆಸುತ್ತಿರುವ ಮುತ್ತಾಹಿದ ಕ್ವಾಮಿ ಮೂವ್ಮೆಂಟ್ (ಎಂಕ್ಯೂಎಂ)ನ ಸ್ಥಾಪಕ ಅಲ್ತಾಫ್ ಹುಸೈನ್ ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದ್ದಾರೆ. “ಅದು ಸಾಧ್ಯವಾಗದಿದ್ದರೆ, ನನ್ನ ಪ್ರಕರಣವನ್ನು ಅಂತರ್ರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯಲು ಹಣಕಾಸು ನೆರವನ್ನಾದರೂ ನೀಡಿ” ಎಂದು ಮನವಿ ಮಾಡಿದ್ದಾರೆ.
“ನಾನು ರಾಜಕೀಯದಲ್ಲಿ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ” ಎಂದು ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು. ಅಯೋಧ್ಯೆ ಜಮೀನು ವಿವಾದದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನೂ ಅವರು ತನ್ನ ಭಾಷಣದಲ್ಲಿ ಸ್ವಾಗತಿಸಿದರು.
ಪಾಕಿಸ್ತಾನದಲ್ಲಿ ಕೆಲವು ವರ್ಷಗಳ ಹಿಂದೆ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡಿರುವ ಆರೋಪದಲ್ಲಿ 67 ವರ್ಷದ ಎಂಕ್ಯೂಎಂ ಸ್ಥಾಪಕ ಬ್ರಿಟನ್ನಲ್ಲಿ ವಿಚಾರಣೆ ಎದುರಿಸಲಿದ್ದಾರೆ.