ನಿತ್ಯಾನಂದ ವಿದೇಶಕ್ಕೆ ಪರಾರಿ: ಗುಜರಾತ್ ಪೊಲೀಸರು
ಅಹ್ಮದಾಬಾದ್, ನ.21: ತನ್ನ ವಿರುದ್ಧ ಕ್ರಿಮಿನಲ್ ಪ್ರಕರಣವೊಂದು ದಾಖಲಾದ ನಂತರ ಸ್ವಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಗುಜರಾತ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಇಬ್ಬರು ಯುವತಿಯರನ್ನು ಅಪಹರಿಸಿದ ಆರೋಪಕ್ಕೆ ಸಂಬಂಧಿಸಿ ನಿತ್ಯಾನಂದನ ವಿರುದ್ಧ ಬುಧವಾರ ಎಫ್ ಐಆರ್ ದಾಖಲಾಗಿತ್ತು.
ನಿತ್ಯಾನಂದ ವಿದೇಶಕ್ಕೆ ಪರಾರಿಯಾಗಿದ್ದಾನೆ. ಸೂಕ್ತ ಕ್ರಮಗಳ ಮೂಲಕ ಆತನನ್ನು ಕಸ್ಟಡಿಗೆ ಪಡೆಯಲಾಗುವುದು. ಕರ್ನಾಟಕದಲ್ಲಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ನಂತರ ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಅಹ್ಮದಾಬಾದ್ ನ ಎಸ್ಪಿ ಆರ್ ವಿ ಅನ್ಸಾರಿ ಮಾಹಿತಿ ನೀಡಿದ್ದಾರೆ.
ಆತ ಟ್ರಿನಿಡಾಡ್ ಟೊಬ್ಯಾಗೊದಲ್ಲಿದ್ದಾನೆ ಎನ್ನುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ.
"ಗುಜರಾತ್ ಪೊಲೀಸರಿಂದಾಗಲೀ, ಗೃಹ ಸಚಿವಾಲಯದಿಂದಾಗಲೀ ನಮ್ಮಲ್ಲಿ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಗಡೀಪಾರು ಮನವಿಗಾಗಿ ನಮಗೆ ವ್ಯಕ್ತಿಯೊಬ್ಬ ಇರುವ ಸ್ಥಳ ಮತ್ತು ರಾಷ್ಟ್ರೀಯತೆಯ ಮಾಹಿತಿ ಬೇಕಾಗಿದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.