ಇಡೀ ವಿಶ್ವವೇ ಧರ್ಮಸ್ಥಳವಾಗಬೇಕು, ಎಲ್ಲೆಲ್ಲೂ ಧರ್ಮ, ನ್ಯಾಯ, ಶಾಂತಿ ನೆಲೆಸಬೇಕು: ಡಾ. ವೀರೇಂದ್ರ ಹೆಗ್ಗಡೆ

Update: 2019-11-22 18:37 GMT

ಬೆಳ್ತಂಗಡಿ: ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ, ಸೇವಾ ಮನೋಭಾವದಿಂದ ಜೊತೆಯಾಗಿ ಸಾಗಿದರೆ ದೇವರು ಸದಾ ಪರೋಕ್ಷವಾಗಿ ನಮ್ಮ ಜೊತೆ ಇದ್ದು ನಾವು ದೇವರನ್ನು ಸ್ಪರ್ಶಿಸಬಹುದು. ಅನುಭವಿಸಿ ಆನಂದಿಸಬಹುದು. ಇದಕ್ಕಾಗಿ ಎಲ್ಲರಲ್ಲಿ ಶುದ್ಧಚಾರಿತ್ರ್ಯ, ಆತ್ಮ ವಿಶ್ವಾಸ ನಂಬಿಕೆ, ಪ್ರೀತಿ-ವಿಶ್ವಾಸ, ಸೇವಾ ಮನೋಭಾವ ಇರಬೇಕು ಎಂದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ನಿರಂತರ ಪರಿವರ್ತನಾಶೀಲವಾದ ಜಗತ್ತಿನಲ್ಲಿ ನಾವು ಸಂದರ್ಭಕ್ಕೆ ಹಾಗೂ ಕಾಲಕ್ಕೆ ಸರಿಯಾಗಿ ಹೊಂದಿಕೊಂಡು ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಹೊಗಳಿಕೆಗೆ ಹಿಗ್ಗಬೇಡಿ, ತೆಗಳಿಕೆಗೆ ಕುಗ್ಗಬೇಡಿ. ಎಲ್ಲವನ್ನೂ ಆತ್ಮವಿಶ್ವಾಸದಿಂದ ಮತ್ತು ಸಮಚಿತ್ತದಿಂದ ಸ್ವೀಕರಿಸಿ ಆದರ್ಶ ಜೀವನ ನಡೆಸಿ ಎಂದು ಸಲಹೆ ನೀಡಿದ ಹೆಗ್ಗಡೆ ಅವರು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಮತ್ತು ಜನರ ಪ್ರೀತಿ– ವಿಶ್ವಾಸದಿಂದ ಇನ್ನಷ್ಟು ಹೆಚ್ಚು ಸೇವಾಕಾರ್ಯಗಳನ್ನು ಮಾಡಿ ಬೆಳ್ತಂಗಡಿ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು  ಭರವಸೆ ನೀಡಿದರು.

ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ.ಹರೀಶ್‍ ಕುಮಾರ್, ಉಜಿರೆಯ ಶ್ರೀ ಜನಾರ್ದನ ಸ್ವಾಮಿದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತರಿದ್ದರು.

ಪ್ರೊ.ಎಸ್. ಪ್ರಭಾಕರ್, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ ಇದ್ದರು. ಕೆ.ಪ್ರತಾಪಸಿಂಹ ನಾಯಕ್ ಸ್ವಾಗತಿಸಿದರು. ಶ್ರೀನಿವಾಸ್‍ರಾವ್ ಕಾರ್ಯಕ್ರಮ ನಿರ್ವಹಿಸಿದರು.

ವಸ್ತು ಪ್ರದರ್ಶನ ಉದ್ಘಾಟನೆ : ಕನ್ನಡ ಮಾಧ್ಯಮ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ  ಉದ್ಘಾಟಿಸಿ ಶುಭ ಹಾರೈಸಿದರು.

ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ವಸ್ತುಪ್ರದರ್ಶನದಲ್ಲಿ 197 ಮಳಿಗೆಗಳಿದ್ದು ಪ್ರತಿ ದಿನ ಬೆಳಗ್ಗೆ  9 ರಿಂದ ರಾತ್ರಿ 9 ಗಂಟೆ ವರೆಗೆ ಉಚಿತ ಪ್ರವೇಶಾವಕಾಶವಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News