BIG BREAKING NEWS: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ

Update: 2019-11-26 13:08 GMT

ಮುಂಬೈ, ನ.26: ಕಳೆದೊಂದು ತಿಂಗಳಿನಿಂದಲೂ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಬೃಹತ್ ರಾಜಕೀಯ ನಾಟಕಕ್ಕೆ ಕೊನೆಗೂ ತೆರೆ ಬಿದ್ದಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬುಧವಾರ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಯನ್ನೆದುರಿಸಬೇಕಿದ್ದ ದೇವೇಂದ್ರ ಫಡ್ನವೀಸ್ ಅವರು ಅದಕ್ಕೂ ಮೊದಲೇ,ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಫಡ್ನವೀಸ್ ತನ್ನ ನಿರ್ಧಾರವನ್ನು ಪ್ರಕಟಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಡ್ನವೀಸ್,‘ಅಜಿತ ಪವಾರ್ ಅವರು ನನಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ‘ಕುದುರೆ ವ್ಯಾಪಾರ ’ದಲ್ಲಿ ತೊಡಗದಿರಲು ಬಿಜೆಪಿ ಮೊದಲ ದಿನದಿಂದಲೇ ನಿರ್ಧರಿಸಿತ್ತು. ಎನ್‌ಸಿಪಿ ನಮ್ಮೊಂದಿಗಿದ್ದರಿಂದ ಸರಕಾರ ರಚನೆಗೆ ನಾವಷ್ಟೇ ನಿರ್ಧರಿಸಿದ್ದೆವು. ಈಗ ಪವಾರ್ ರಾಜೀನಾಮೆ ನೀಡಿರುವುದರಿಂದ ನಾನೂ ರಾಜೀನಾಮೆ ಸಲ್ಲಿಸುತ್ತೇನೆ ’ ಎಂದು ತಿಳಿಸಿದರು.

ಬಿಜೆಪಿ ಮೈತ್ರಿಕೂಟಕ್ಕೆ ಜನಾದೇಶ ಲಭಿಸಿದ್ದರಿಂದ ತಾನು ಸರಕಾರವನ್ನು ರಚಿಸಿದ್ದೆ. ಮಿತ್ರಪಕ್ಷ ಶಿವಸೇನೆ ತನ್ನನ್ನು ಬೆಂಬಲಿಸಲು ನಿರಾಕರಿಸಿದ್ದರಿಂದ ಆರಂಭದಲ್ಲಿ ಸರಕಾರ ರಚನಗೆ ಹಕ್ಕು ಮಂಡಿಸಿರಲಿಲ್ಲ. ಆದರೆ ಅಜಿತ್ ಪವಾರ್ ಬೆಂಬಲದ ಕೊಡುಗೆ ನೀಡಿದಾಗ ಸರಕಾರವನ್ನು ರಚಿಸಲು ಮತ್ತು ತನ್ನ ಪಕ್ಷಕ್ಕೆ ದೊರಕಿದ್ದ ಜನಾದೇಶವನ್ನು ಪಾಲಿಸಲು ತಾನು ನಿರ್ಧರಿಸಿದ್ದೆ ಎಂದು ಅವರು ಹೇಳಿದರು.

‘ಬಿಜೆಪಿ-ಶಿವಸೇನೆ ಮಹಾಮೈತ್ರಿಗೆ ಸ್ಪಷ್ಟ ಬಹುಮತ ಲಭಿಸಿತ್ತು ಮತ್ತು ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆದ್ದಿತ್ತು. ನಾವು ಶಿವಸೇನೆಯ ಮೈತ್ರಿಯೊಂದಿಗೆ ಸ್ಪರ್ಧಿಸಿದ್ದೆವು ನಿಜ,ಆದರೆ ಜನಾದೇಶ ಬಿಜೆಪಿ ಪರವಾಗಿತ್ತು. ಏಕೆಂದರೆ ನಾವು ಸ್ಪರ್ಧಿಸಿದ್ದ ಸ್ಥಾನಗಳ ಪೈಕಿ ಶೇ.70ರಷ್ಟನ್ನು ಗೆದ್ದಿದ್ದೆವು. ಜನಾದೇಶದಂತೆ ಸರಕಾರ ರಚನೆಗೆ ನಾವು ಪ್ರಯತ್ನಿಸಿದ್ದೆವು. ಇದು ‘ಸಂಖ್ಯೆಗಳ ಆಟ’ ಎನ್ನುವುದನ್ನು ಶಿವಸೇನೆ ಅರಿತುಕೊಂಡಿತ್ತು ಮತ್ತು ಅದರ ಚೌಕಾಶಿ ಶಕ್ತಿ ಹೆಚ್ಚಲಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಂಡಿದ್ದೆವು’ ಎಂದು ಫಡ್ನವೀಸ್ ಹೇಳಿದರು.

ವಿಶ್ವಾಸ ಮತವನ್ನು ಎದುರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಫಡ್ನವೀಸ್‌ಗೆ ಆದೇಶಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಾತುಕತೆ ನಡೆಸಿದ ಬಳಿಕ ಫಡ್ನವೀಸ್‌ರ ರಾಜೀನಾಮೆ ನಿರ್ಧಾರ ಹೊರಬಿದ್ದಿತು.

ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಯು ಸಮಯಸಾಧಕ ಕೂಟವಾಗಿದೆ ಎಂದು ಆರೋಪಿಸಿದ ಫಡ್ನವೀಸ್, ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದು ಅವುಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮವಾಗಿದೆ ಎಂದರು.

‘ನಾವು ಅವರಿಗಾಗಿ (ಶಿವಸೇನೆ) ತುಂಬ ಸಮಯ ಕಾದಿದ್ದೆವು. ಆದರೆ ಅವರು ಪ್ರತಿಕ್ರಿಯಿಸಿರಲಿಲ್ಲ. ಬದಲಿಗೆ ಕಾಂಗ್ರೆಸ್-ಎನ್‌ಸಿಪಿ ಜೊತೆ ಮಾತುಕತೆ ಶುರುವಿಟ್ಟುಕೊಂಡಿದ್ದರು. ಯಾರನ್ನಾದರೂ ಭೇಟಿಯಾಗಲು ಎಂದೂ ‘ಮಾತೋಶ್ರೀ(ಠಾಕ್ರೆಗಳ ನಿವಾಸ)’ಯಿಂದ ಹೊರಬೀಳದಿದ್ದವರು ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಸರಕಾರ ರಚನೆಗಾಗಿ ಬಾಗಿಲಿನಿಂದ ಬಾಗಿಲು ಎಡತಾಕತೊಡಗಿದ್ದರು. ಅಧಿಕಾರದ ಹಸಿವು ಎಷ್ಟಿದೆಯೆಂದರೆ ಶಿವಸೇನೆ ನಾಯಕರು ಸೋನಿಯಾ ಗಾಂಧಿಯವರೊಂದಿಗೂ ಮೈತ್ರಿಗೆ ಸಿದ್ಧರಾಗಿದ್ದಾರೆ. ಈ ಮೂರು ಚಕ್ರಗಳ ಸರಕಾರ ಸ್ಥಿರವಾಗಿರುತ್ತದೆ ಎಂಬ ಬಗ್ಗೆ ನನಗೆ ಶಂಕೆಯಿದೆ,ಆದರೆ ಬಿಜೆಪಿ ಪರಿಣಾಮಕಾರಿ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.

ಶನಿವಾರ ನಾಟಕೀಯ ವಿದ್ಯಮಾನಗಳ ನಡುವೆ ಫಡ್ನವೀಸ್ ಮುಖ್ಯಮಂತ್ರಿಯಾಗಿ ಮತ್ತು ಪವಾರ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಫಡ್ನವೀಸ್ ಸೋಮವಾರ ಮುಖ್ಯಮಂತ್ರಿ ಕರ್ತವ್ಯಕ್ಕೆ ಹಾಜರಾಗಿದ್ದರೂ ಪವಾರ್ ಸುಳಿವಿರಲಿಲ್ಲ. ಮಂಗಳವಾರ ಬೆಳಿಗ್ಗೆ 26/11ರ ಮುಂಬೈ ದಾಳಿಗಳ ಹುತಾತ್ಮರಿಗೆ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೂ ಅವರು ಗೈರಾಗಿದ್ದರು. ಸರಕಾರವನ್ನು ತೊರೆಯುವಂತೆ ಮತ್ತು ಪಕ್ಷಕ್ಕೆ ಮರಳುವಂತೆ ಶರದ್ ಪವಾರ್ ಸೇರಿದಂತೆ ಎನ್‌ಸಿಪಿ ನಾಯಕರು ಅವರ ಮನವೊಲಿಸುತ್ತಿದ್ದಾರೆ ಎಂಬ ವರದಿಗಳನ್ನು ಅವರ ಗೈರು ಹಾಜರಿ ಪುಷ್ಟೀಕರಿಸಿತ್ತು.

‘ಶರದ್ ಪವಾರರನ್ನೇ ಕೇಳಿ’

ಅಜಿತ್ ಪವಾರ್ ಅವರು ಬಿಜೆಪಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ಕಾರ್ಯತಂತ್ರವಾಗಿತ್ತು ಎಂದು ನೀವು ಭಾವಿಸಿದ್ದೀರಾ ಎಂಬ ಪ್ರಶ್ನೆಗೆ ಫಡ್ನವೀಸ್,ಈ ಬಗ್ಗೆ ಶರದ್ ಪವಾರ್ ಮಾತ್ರ ಉತ್ತರಿಸಬಲ್ಲರು ಎಂದು ಪ್ರತಿಕ್ರಿಯಿಸಿದರು.

ವೈಯಕ್ತಿಕ ಕಾರಣದಿಂದ ಡಿಸಿಎಂ ಹುದ್ದೆಗೆ ಅಜಿತ್ ಪವಾರ್ ರಾಜೀನಾಮೆ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮಂಗಳವಾರ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಶನಿವಾರ ಸರಕಾರ ರಚನೆಗೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದ ಸಂದರ್ಭ ಪವಾರ್, ತನಗೆ ಎನ್‌ಸಿಪಿ ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದರು. ಪವಾರ್ ಹೆಜ್ಜೆಯನ್ನು ಅವರ ಚಿಕ್ಕಪ್ಪ ಹಾಗೂ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬೆಂಬಲಿಸಿರಲಿಲ್ಲ. ಆದರೆ ಅಜಿತ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎನ್‌ಸಿಪಿ ಶಾಸಕರೆಲ್ಲರೂ ಬಳಿಕ ಪಕ್ಷದ ಮಡಿಲಿಗೆ ವಾಪಸಾಗಿದ್ದರು ಮತ್ತು ಅಜಿತ್ ಏಕಾಂಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News