ಗೋಡ್ಸೆ ಭಯೋತ್ಪಾದಕನಾಗಿರಲಿಲ್ಲ, ಆದರೆ ತಪ್ಪು ಮಾಡಿದ್ದ: ಬಿಜೆಪಿ ಶಾಸಕ
Update: 2019-11-28 15:39 GMT
ಬಲಿಯಾ (ಉ.ಪ್ರ), ನ.28: ಮಹಾತ್ಮಾ ಗಾಂಧಿಯವರ ಹಂತಕ ನಾಥೂರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಹೊಗಳಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಬುಧವಾರ ಲೋಕಸಭೆಯಲ್ಲಿ ನೀಡಿದ್ದ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲು ಪಕ್ಷದ ಪ್ರಯತ್ನದ ನಡುವೆಯೇ ಬಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು, ಗೋಡ್ಸೆ ತಪ್ಪು ಮಾಡಿದ್ದ, ಆದರೆ ಆತ ಭಯೋತ್ಪಾದಕನಾಗಿರಲಿಲ್ಲ ಎಂದು ಗುರುವಾರ ಇಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಗೋಡ್ಸೆ ಭಯೋತ್ಪಾದಕನಾಗಿರಲಿಲ್ಲ. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರು ಭಯೋತ್ಪಾದಕರು. ಗೋಡ್ಸೆ ತಪ್ಪು ಮಾಡಿದ್ದ. ಆತ ದೇಶಭಕ್ತ ಗಾಂಧೀಜಿಯವರನ್ನು ಕೊಲ್ಲಬಾರದಿತ್ತು ಎಂದರು. ಗೋಡ್ಸೆ ದೇಶಭಕ್ತನಾಗಿದ್ದನೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.
ಸಿಂಗ್ ಹಿಂದೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.