ಯುನಿವೆಫ್ ಕುದ್ರೋಳಿ ಶಾಖೆಯಿಂದ ಮೊಹಲ್ಲಾ ಸಭೆ

Update: 2019-12-04 05:12 GMT

ಮಂಗಳೂರು, ಡಿ.4: ಯುನಿವೆಫ್ ಕರ್ನಾಟಕ 2019 ರ ನವೆಂಬರ್ 22 ರಿಂದ  2020 ರ ಜನವರಿ 24 ರ ವರೆಗೆ ‘ಮಾನವ ಸಂಬಂಧಗಳು ಮತ್ತು ಪ್ರವಾದಿ ಮುಹಮ್ಮದ್ (ಸ.)’ ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಅಂಗವಾಗಿ ಕುದ್ರೋಳಿ ಶಾಖೆಯ ವತಿಯಿಂದ ‘ಮೊಹಲ್ಲಾ ಸಭೆ’ ಕುದ್ರೋಳಿಯ ಯಾಸೀನ್ ಮಂಡಿ ಬಳಿ ಜರಗಿತು.

‘ಪ್ರಚಲಿತ ವಿದ್ಯಮಾನ ಮತ್ತು ಪ್ರವಾದಿಯವರ ಬೋಧನೆ’ ಎಂಬ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿ ಯುನಿವೆಫ಼್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ "ಎಲ್ಲ ಕಾಲಗಳಲ್ಲೂ ಸತ್ಯ ಪ್ರಬೋಧನೆಗೆ ಅಡ್ಡಿ ಆತಂಕಗಳು ಎದುರಾಗಿದ್ದವು. ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ನಡೆಯುವ ಪ್ರಚಲಿತ ವಿದ್ಯಮಾನಗಳು ನಮ್ಮನ್ನು ಸತ್ಯದ ಮಾರ್ಗದಲ್ಲಿ ಇನ್ನಷ್ಟು ಗಟ್ಟಿಗೊಳಿಸಬೇಕೇ ಹೊರತು ನಾವೆಂದೂ ಎದೆಗುಂದಬಾರದು. ಪ್ರವಾದಿ ಮುಹಮ್ಮದ್(ಸ) ತನ್ನ ಪ್ರವಾದಿತ್ವದ ಆರಂಭದ ಹಂತದಲ್ಲಿ ಧರ್ಮ ಪ್ರಚಾರದ ಮಾರ್ಗದಲ್ಲಿ ಅನುಭವಿಸಿದ ಯಾತನೆಗಳು, ಎದುರಿಸಿದ ಅಡ್ಡಿ ಆತಂಕಗಳು ಅವರನ್ನು ಕುಗ್ಗಿಸದೆ ಅವರ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿ ಯಶಸ್ಸಿನ ಹಾದಿಯನ್ನು ಅವರಿಗೆ ಸುಲಭಗೊಳಿಸಿತು. ವಿಶ್ವಾಸ ಮತ್ತು ಐಕ್ಯದಿಂದ ಸಮಸ್ಯೆಗಳನ್ನು ಎದುರಿಸಲು ಪ್ರವಾದಿಯ ಜೀವನ ನಮಗೆ ಮಾದರಿಯಾಗಬೇಕು" ಎಂದು ಹೇಳಿದರು.

ಬಳಿಕ ನಡೆದ ಚರ್ಚೆಯಲ್ಲಿ ಸಭಿಕರು ಸಕ್ರಿಯವಾಗಿ ಭಾಗವಹಿಸಿದರು.

ಯುನಿವೆಫ಼್ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಮರ್ ಮುಖ್ತಾರ್ ಕಿರಾಅತ್ ಪಠಿಸಿದರು. ಕುದ್ರೋಳಿ ಶಾಖಾಧ್ಯಕ್ಷ ಸೈಫ಼ುದ್ದೀನ್ ಕುದ್ರೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಪಾರೆ, ಜಿಲ್ಲಾ ಕಾರ್ಯದರ್ಶಿ ಅಡ್ವೊಕೇಟ್ ಸಿರಾಜುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News