ಕನ್ನಯ್ಯ ಕುಮಾರ್ ವಿಚಾರಣೆ: ಮನವಿ ತಿರಸ್ಕೃತ
Update: 2019-12-04 15:45 GMT
ಹೊಸದಿಲ್ಲಿ, ಡಿ. 4: ರಾಷ್ಟ್ರ ದ್ರೋಹ ಪ್ರಕರಣದಲ್ಲಿ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್ ಅವರ ವಿಚಾರಣೆಗೆ ಅನುಮತಿ ನೀಡುವಂತೆ ಆಪ್ ಸರಕಾರಕ್ಕೆ ನಿರ್ದೇಶಿಸಲು ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ನಿರಾಕರಿಸಿದೆ.
ಇದಕ್ಕೆ ಸಂಬಂಧಿಸಿ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಸಿ. ಹರಿ ಶಂಕರ್ ಅವರನ್ನು ಒಳಗೊಂಡ ಪೀಠ ಹೇಳಿದೆ. ಅಸ್ತಿತ್ವದಲ್ಲಿರುವ ನಿಯಮ, ನೀತಿ ಕಾನೂನು ಹಾಗೂ ಪ್ರಕರಣದ ಸತ್ಯಾಂಶವನ್ನು ಅನುಸರಿಸಿ ವಿಚಾರಣೆಗೆ ಅನುಮತಿ ನೀಡಬೇಕೇ ಎಂಬುದನ್ನು ದಿಲ್ಲಿ ಸರಕಾರ ನಿರ್ಧರಿಸಲಿದೆ ಎಂದು ಪೀಠ ಹೇಳಿದೆ.
ಮನವಿ ತಿರಸ್ಕರಿಸಿದ ಪೀಠ, ದೂರುದಾರರಾಗಿರುವ ಬಿಜೆಪಿಯ ಮಾಜಿ ಶಾಸಕ ನಂದ ಕಿಶೋರ್ ಗರ್ಗ್ ಅವರಿಗೆ ಎಫ್ಐಆರ್ನಲ್ಲಿ ಕೆಲವು ವೈಯುಕ್ತಿಕ ಹಿತಾಸಕ್ತಿ ಇರುವಂತೆ ಕಾಣುತ್ತದೆ ಎಂದು ಹೇಳಿದೆ.