ಬಂಟರ ಸಂಘದಲ್ಲಿ ಬದಲಾವಣೆ ಅಗತ್ಯ: ಎ.ಸದಾನಂದ ಶೆಟ್ಟಿ

Update: 2019-12-06 09:31 GMT

ಮಂಗಳೂರು, ಡಿ.6: ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಡಿ.12ರಂದು ನಡೆಯಲಿರುವ ಚುನಾವಣೆಯಲ್ಲಿ ಬದಲಾವಣೆಗಾಗಿ ಈ ಬಾರಿ ಕಾರ್ಮಿಕ ಮುಖಂಡ ಸುರೇಶ್ಚಂದ್ರ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ ಎಂದು ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಸಂಘದ ಮಾಜಿ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸ್ವಾತಂತ್ರ ಹೋರಾಟಗಾರ, ಮಾಜಿ ಶಾಸಕ ದಿ.ಎಂ.ಲೋಕಯ್ಯ ಶೆಟ್ಟಿಯವರ ಪುತ್ರರಾಗಿರುವ ಸುರೇಶ್ಚಂದ್ರ ಶೆಟ್ಟಿ ಎಂ., 38 ವರ್ಷಗಳಿಂದ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಈ ಬಾರಿ ಬಂಟರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಇಳಿದಿದ್ದಾರೆ. ವಿದ್ಯಾರ್ಥಿ ನಾಯಕನಾಗಿ, ರಾಷ್ಟಮಟ್ಟದ ಕಾರ್ಮಿಕ ಮುಖಂಡನಾಗಿ, ಉತ್ತಮ ಕ್ರೀಡಾ ಸಂಘಟಕರಾಗಿ ಸುರೇಶ್ಚಂದ್ರ ಶೆಟ್ಟಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಬಂಟರ ಸಂಘದ ವತಿಯಿಂದ ನಿರ್ಮಾಣವಾಗಬೇಕಾದ ಸಭಾಂಗಣದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸಂಘದ ಕುಂಠಿತಗೊಂಡಿರುವ ಎಲ್ಲ ಯೋಜನೆಗಳನ್ನು ಮುನ್ನಡೆಸಲು ಸಮರ್ಥ ನಾಯಕತ್ವದ ಅಗತ್ಯವಿದೆ. ಸಂಘದ ಹಾಲಿ ಅಧಿಕಾರಾವಧಿ ಪೂರ್ಣ ಗೊಳಿಸಿರುವ ಅಜಿತ್ ಕುಮಾರ್ ಎರಡು ಅವಧಿಗೆ ಅಧ್ಯಕ್ಷ ರಾಗಿದ್ದರು. ಈ ಬಾರಿ ಬದಲಾವಣೆ ಅಗತ್ಯವಿದೆ. ಹಿಂದಿನ ಅಧ್ಯಕ್ಷರುಗಳಿಗೆ ಸಹಕಾರ ನೀಡಿದ ಮತದಾರರು ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ಸದಾನಂದ ಶೆಟ್ಟಿ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಬಂಟರ ಸಂಘದ ಮಾಜಿ ಅಧ್ಯಕ್ಷ ಅಮರನಾಥ ಶೆಟ್ಟಿ, ಶ್ರೀ ನಾಥ ಹೆಗ್ಡೆ, ಇತರ ಮುಖಂಡರಾದ ರಾಜಗೋಪಾಲ ರೈ, ಬಿ.ಪುಷ್ಪಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News