ಗುಡ್ಡಟ್ಟು: ಹತ್ತು ದಿನಗಳಲ್ಲಿ ಮತ್ತೊಂದು ಗಂಡು ಚಿರತೆ ಸೆರೆ

Update: 2019-12-07 07:13 GMT

ಶಂಕರನಾರಾಯಣ, ಡಿ. 7: ಯಡಾಡಿ ಮತ್ಯಾಡಿ ಗ್ರಾಪಂ ವ್ಯಾಪ್ತಿಯ ಗುಡ್ಡಟ್ಟು ಪರಿಸರದ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದ ಮತ್ತೊಂದು ಗಂಡು ಚಿರತೆಯನ್ನು ಕೇವಲ ಹತ್ತು ದಿನಗಳೊಳಗೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಗುಡ್ಡಟ್ಟು ಪರಿಸರದಲ್ಲಿ ಚಿರತೆಗಳು ಓಡಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಶಂಕರನಾರಾಯಣ ವಲಯ ಅರಣ್ಯ ಇಲಾಖೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಗುಡ್ಡಟ್ಟು ಚಂದ್ರಾವತಿ ಎಂಬವರ ಮನೆಯ ಬಳಿ ಬೋನು ಇರಿಸಿ ನ.26ರಂದು ರಾತ್ರಿ 4-5ವರ್ಷ ವಯಸ್ಸಿನ ಗಂಡು ಚಿರತೆ ಸೆರೆ ಹಿಡಿಯಲಾಗಿತ್ತು.

ಇದೇ ಪರಿಸರದಲ್ಲಿ ಇನ್ನೊಂದು ಚಿರತೆ ಇರುವ ಬಗ್ಗೆ ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮರುದಿನ ಅದೇ ಜಾಗದಲ್ಲಿ ನಾಯಿಯೊಂದಿಗೆ ಅದೇ ಬೋನನ್ನು ಇರಿಸಲಾಗಿತ್ತು. ಡಿ.6ರಂದು ರಾತ್ರಿ ವೇಳೆ ನಾಯಿ ಬೇಟೆಗೆ ಬಂದ ಚಿರತೆ ಈ ಬೋನಿನೊಳಗೆ ಸೆರೆಯಾಯಿತು. ಇಂದು ಬೆಳಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಶಂಕರನಾರಾಯಣ ವಲಯ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಮೂವರೆ ವರ್ಷ ವಯಸ್ಸಿನ ಗಂಡು ಚಿರತೆಯನ್ನು ರಕ್ಷಿಸಿದ್ದಾರೆ.

ಆರೋಗ್ಯವಂತವಾಗಿದ್ದ ಚಿರತೆಯನ್ನು ಬಿದ್ಕಲ್‌ಕಟ್ಟೆಯ ಪಶುವೈದ್ಯಾಧಿಕಾರಿ ಮೂಲಕ ಪರೀಕ್ಷೆಗೆ ಒಳಪಡಿಸಿ, ಬಳಿಕ ಅಭಯಾರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ, ಉಪವಲಯ ಅರಣ್ಯಾಧಿಕಾರಿ ಸಂತೋಷ್ ದೇವಾಡಿಗ, ಅರಣ್ಯ ರಕ್ಷಕರಾದ ಸಂತೋಷ್ ಜೋಗಿ, ರವಿ, ಸುದೀಪ್, ರವೀಂದ್ರ, ವೀಕ್ಷಕರಾದ ಲಕ್ಷ್ಮಣ್, ಶಿವ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News