ಉಡುಪಿ: ವಿಕಲಚೇತನರ ಬಸ್‌ಪಾಸ್ ನವೀಕರಣಕ್ಕೆ ಸೂಚನೆ

Update: 2019-12-09 16:52 GMT

ಉಡುಪಿ, ಡಿ.9: ಕ.ರಾ.ರ.ಸಾ.ಸಂಸ್ಥೆಯು ವಿಕಲಚೇತನರ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸುತ್ತಿದೆ. 2019ನೇ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ಬಸ್‌ಪಾಸ್‌ಗಳ ಅವಧಿ ಡಿ.31ಕ್ಕೆ ಮುಕ್ತಾಯಗೊಳ್ಳಲಿದ್ದು, 2020ನೇ ಸಾಲಿಗಾಗಿ ಈ ಬಸ್ಸು ಪಾಸುಗಳನ್ನು 2020ರ ಜನವರಿ 1ರಿಂದ ನವೀಕರಿಸಲು ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಹೊಸ ಪಾಸುಗಳನ್ನು ಸಹ ನೀಡಲಾಗುವುದು. ವಿಕಲಚೇತನರ ರಿಯಾಯಿತಿ ಬಸ್‌ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲ ವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2019ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು ಫೆ.29ರವರೆಗೆ ಮಾನ್ಯ ಮಾಡಲಾಗುವುದು.

2019ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್‌ಪಾಸುಗಳನ್ನು ಕರಾರಸಾ ನಿಗಮ, ಉಡುಪಿ ಘಟಕ (ನಿಟ್ಟೂರು) ಮತ್ತು ಕರಾರಸಾ ನಿಗಮ ಕುಂದಾಪುರ ಘಟಕದಲ್ಲಿ ಬಂದು ನವೀಕರಿಸಿಕೊಡಲಾಗುವುದು. ಸ್ಥಳ ಹಾಗೂ ದಿನಾಂಕಗಳನ್ನು ಮುಂದೆ ತಿಳಿಸಲಾಗುವುದು.

ಹಳೆ ಪಾಸುಗಳ ನವೀಕರಣಕ್ಕೆ ಹಳೆಯ ಕಾರ್ಡನ್ನು ಕಡ್ಡಾಯವಾಗಿ ಹಿಂದಿರುಗಿಸಬೇಕು. ಹೊಸ ಕಾರ್ಡಿಗೆ 660ರೂ.ನ್ನು ನೀಡಬೇಕು.ಒಂದು ಸ್ಟ್ಯಾಂಪ್ ಮತ್ತು 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು, ಗುರುತಿನ ಚೀಟಿಯ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡಲು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿತರಿಸುವ ಗುರುತಿನ ಚೀಟಿಯ ಮೂಲ ಪ್ರತಿ, ವಿಳಾಸದ ದೃಢೀಕರಣ ದಾಖಲಾತಿ (ಆಧಾರ್ ಕಾರ್ಡ್) ಮೂಲ ಪ್ರತಿಯನ್ನು ಹಾಗೂ ಜೆರಾಕ್ಸ್ ಪ್ರತಿಯನ್ನು ತರಬೇಕು. ಪಾಸುಗಳನ್ನು ನವೀಕರಿಸಲು ಫೆ.29 ಕೊನೆಯ ದಿನವಾಗಿದೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News