ಪ್ಲಾಸ್ಟಿಕ್ ತ್ಯಾಜ್ಯವಲ್ಲ ಸಂಪನ್ಮೂಲ: ಡಾ.ಆರ್.ವಾಸುದೇವನ್

Update: 2019-12-10 14:18 GMT

 ಉಡುಪಿ, ಡಿ.10: ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಿರುವ ಪ್ಲಾಸ್ಟಿಕ್ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಪ್ಲಾಸ್ಟಿಕ್ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯವೆನ್ನುವಂತಾಗಿದೆ. ಇದರೊಂದಿಗೇ ಪ್ಲಾಸ್ಟಿಕ್‌ನಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬೇಕಾದ ಬೃಹತ್ ಸಮಸ್ಯೆಯೂ ನಮ್ಮ ಮುಂದಿದೆ. ಹೀಗಾಗಿ ಪ್ಲಾಸ್ಟಿಕ್‌ನ್ನು ಒಂದು ತ್ಯಾಜ್ಯವೆಂದು ಪರಿಗಣಿಸುವ ಬದಲಿಗೆ ಅದನ್ನು ಯಾವ ರೀತಿಯಲ್ಲಿ ಬರು ಬಳಕೆ ಮಾಡಬಹುದು ಎಂಬು ದನ್ನು ತಿಳಿಸಿದರೆ, ಅದು ಒಂದು ಸಂಪನ್ಮೂಲವಾಗುತ್ತದೆ ಎಂದು ದೇಶದ ‘ಪ್ಲಾಸ್ಟಿಕ್‌ಮ್ಯಾನ್’ ಎಂದೇ ಖ್ಯಾತಿ ಪಡೆದಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಮಿಳುನಾಡಿನ ಡಾ.ರಾಜಗೋಪಾಲನ್ ವಾಸುದೇವನ್ ಹೇಳಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಜಿಲ್ಲಾಪಂಚಾಯತ್ ಮತ್ತು ಪಂಚಾಯತ್ ರಾಜ್ ಇಂಜಿನಿ ಯರಿಂಗ್ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ತರಬೇತಿ ಕಾರ್ಯಾಗಾರದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ತಜ್ಞರೂ, ಖ್ಯಾತ ವಿಜ್ಞಾನಿಯೂ ಆಗಿರುವ ಡಾ.ವಾಸುದೇವನ್ ಮಾತನಾಡುತಿದ್ದರು.

ಪ್ಲಾಸ್ಟಿಕ್ ಇರುವುದು ನಿಷೇಧಿಸಲು ಅಲ್ಲ, ಬದಲಿಗೆ ಯೋಜನೆ ರೂಪಿಸಲು ಎಂಬ ಧ್ಯೇಯದೊಂದಿಗೆ, ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡುವಲ್ಲಿ ಯಶಸ್ಸನ್ನು ಕಂಡುಕೊಂಡಿದ್ದೇವೆ. ನಾವು ಬಳಸಿ ಎಸೆಯುವ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳಿಂದ ಪ್ಲಾಸ್ಟಿಕ್ ಟಾರ್ ರಸ್ತೆಗಳನ್ನು ನಿರ್ಮಾಣ ಮಾಡಬಹುದು. ಹತ್ತು ವರ್ಷಗಳವರೆಗೆ ನಿರ್ವಹಣೆ ಬೇಡದ ಈ ರಸ್ತೆಗಳಿಗೆ ತಗಲುವ ವೆಚ್ಚವೂ ಕಡಿಮೆ ಎಂದು ಸದ್ಯ ತ್ಯಾಗರಾಜರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪ್ರೊಪೆಸರ್ ಆಗಿರುವ ಡಾ.ವಾಸುದೇವನ್ ನುಡಿದರು.

100 ಲಕ್ಷ ಟನ್ ಪ್ಲಾಸ್ಟಿಕ್ ಅಗತ್ಯ: ದೇಶದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಟಾರ್ ರಸ್ತೆಗಳನ್ನು ನಿರ್ಮಿಸಲು 100 ಲಕ್ಷ ಟನ್ ಪ್ಲಾಸ್ಟಿಕ್ ಬೇಕಾಗುತ್ತದೆ. ಆದರೆ ನಮ್ಮಲ್ಲಿ ಕೇವಲ 10 ಲಕ್ಷ ಟನ್‌ಗಳಷ್ಟು ಪ್ಲಾಸ್ಟಿಕ್ ಮಾತ್ರವೇ ಇದೆ. ಒಂದು ಟನ್ ಪ್ಲಾಸ್ಟಿಕ್‌ನಿಂದ ಒಂದು ಕಿ.ಮೀ ರಸ್ತೆ ನಿರ್ಮಾಣ ಮಾಡಬಹುದು. ಇದುವರೆಗೂ 11 ರಾಜ್ಯಗಳಲ್ಲಿ ಒಂದು ಲಕ್ಷ ಕಿ.ಮೀ ಉದ್ದದ ಪ್ಲಾಸ್ಟಿಕ್ ಟಾರ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದವರು ವಿವರಿಸಿದರು.

ಪ್ಲಾಸ್ಟಿಕ್‌ನಿಂದ ನಿರ್ಮಿಸುವ ರಸ್ತೆಗಳಲ್ಲಿ ಪಾಟ್‌ಹೋಲ್ (ಗುಂಡಿ) ಸಮಸ್ಯೆ ಇರುವುದಿಲ್ಲ. ಮುಂಬೈನಲ್ಲಿ ನಿರ್ಮಿಸಿರುವ ರಸ್ತೆಗೆ ಮುಂಬೈನಲ್ಲಿ ಸಂಭವಿಸಿದ ಮಹಾ ಮಳೆಯ ಸಂದರ್ಭದಲ್ಲೂ ಹಾನಿಯಾಗಿಲ್ಲ. ದಿನಬಳಕೆಯ ಎಲ್ಲಾ ಪ್ಲಾಸ್ಟಿಕ್‌ಗಳೂ ಉಪಯೋಗಿಯಾಗಿವೆ. ಕಟ್ಟಡಗಳನ್ನು ಒಡೆದಾಗ ದೊರೆಯುವ ಕಾಂಕ್ರೀಟ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಪ್ಲಾಸ್ಟೋನ್ ಅನ್ನು ತಯಾರಿಸಿ ಕಡಿಮೆ ಬೆಲೆಯ, ದೀರ್ಘ ಕಾಲ ಬಾಳಿಕೆ ಬರುವ ಕಟ್ಟಡಗಳನ್ನು ಕಟ್ಟಬಹುದು. ರಸ್ತೆ ಗುಂಡಿಗಳನ್ನು ಮುಚ್ಚುವ ಶೀಘ್ರ ಪರಿಹಾರವಾಗಿ ಥರ್ಮೋಕಾಲ್ ಅನ್ನು ಉಪಯೋಗಿಸಬಹುದು. ಪ್ಲಾಸ್ಟಿಕ್ ಮರುಬಳಕೆಯಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಅವರು ಹೇಳಿದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷ ದಿನಕರ ಬಾಬು, ಎಲ್ಲದರಲ್ಲೂ ನಂ.1 ಎನಿಸಿರುವ ಉಡುಪಿ ಜಿಲ್ಲೆಯು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವಲ್ಲಿ ಹಿಂದೆ ಬಿದ್ದಿದೆ. ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮ ಗಳಿಗೆ ಮುಕ್ತಿ ಹಾಡಲು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡುವ ಕಲ್ಪನೆ ಮೂಡಿತು. ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡು ಒಳ್ಳೆಯ ಯೋಜನೆ ರೂಪಿಸಬೇಕು. ಎಲ್ಲರ ಸಹಕಾರದಿಂದ ಈ ಯೋಜನೆ ಯಶಸ್ವಿೊಳ್ಳಲಿ ಎಂದು ಶುಭ ಹಾರೈಸಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಹಲವು ರಾಜ್ಯಗಳಲ್ಲಿ ಪ್ಲಾಸ್ಟಿಕ್ ಟಾರ್ ರಸ್ತೆಗಳನ್ನು ಈಗಾಗಲೇ ಪ್ರಾಯೋಗಿಕವಾಗಿ ನಿರ್ಮಾಣ ಮಾಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಪರಿಸರ ಹಾನಿಯನ್ನು ತಪ್ಪಿಸ ಬಹುದು. ಅಧಿಕಾರಿಗಳು ಕಾರ್ಯಗಾರದಿಂದ ಪಡೆದುಕೊಂಡ ಮಾಹಿತಿಯನ್ನು ಅಳವಡಿಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ತಿಳಿಸಿದರು.

ತಾನು ಮೈಸೂರು ಮಹಾನಗರ ಪಾಲಿಕೆ ಕಮೀಷನರ್ ಆಗಿದ್ದಾಗ 10 ರಸ್ತೆ ಗಳನ್ನು ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದೆ. ಒಂದೋ, ಎರಡೋ ರಸ್ತೆಗಳನ್ನು ನಿರ್ಮಾಣ ಮಾಡಿ ಯೋಜನೆಯನ್ನು ಕೈಬಿಡುವುದಲ್ಲ, ಬದಲಿಗೆ ಇದು ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಇಂಜಿನಿಯರ್‌ಗಳು ಎಸ್.ಆರ್.ದರಗಳ ಪಟ್ಟಿಯಲ್ಲಿ ಪ್ಲಾಸ್ಟಿಕ್‌ಗೆ ದರ ಇಲ್ಲವೆಂಬ ಕಾರಣಕ್ಕೆ ಈ ಯೋಜನೆ ಕೈಗೊಳ್ಳುವಲ್ಲಿ ವಿಮುಖರಾಗದೇ ಈ ಬಗ್ಗೆ ಅಗತ್ಯ ಪರ್ಯಾಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಕೂಡಾ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೇಕು ಎಂದು ಕಿವಿಮಾತು ಹೇಳಿದರು.

ತಾನು ಮೈಸೂರು ಮಹಾನಗರ ಪಾಲಿಕೆ ಕಮೀಷನರ್ ಆಗಿದ್ದಾಗ 10 ರಸ್ತೆ ಗಳನ್ನು ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದೆ. ಒಂದೋ, ಎರಡೋ ರಸ್ತೆಗಳನ್ನು ನಿರ್ಮಾಣ ಮಾಡಿ ಯೋಜನೆಯನ್ನು ಕೈಬಿಡುವುದಲ್ಲ, ಬದಲಿಗೆ ಇದು ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಇಂಜಿನಿಯರ್‌ಗಳು ಎಸ್.ಆರ್.ದರಗಳ ಪಟ್ಟಿಯಲ್ಲಿ ಪ್ಲಾಸ್ಟಿಕ್‌ಗೆ ದರ ಇಲ್ಲವೆಂಬ ಕಾರಣಕ್ಕೆ ಈ ಯೋಜನೆ ಕೈಗೊಳ್ಳುವಲ್ಲಿ ವಿಮುಖರಾಗದೇ ಈ ಬಗ್ಗೆ ಅಗತ್ಯ ಪರ್ಯಾಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಕೂಡಾ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕಿವಿಮಾತು ಹೇಳಿದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರೀತಿ ಗೆಹ್ಲೋಟ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಜಿಪಂ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಮಧುರೈ ತ್ಯಾಗರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಮಲಿಂಗಂ ಚಂದ್ರಶೇಖರ್ ಉಪಸ್ಥಿತರಿದ್ದರು.

ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸ್ವಾಗತಿಸಿದರು. ಪಿಡಿಓ ಮಹೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News