ತೊಕ್ಕೊಟ್ಟು: ರೈಲಿನಡಿಗೆ ತಲೆಯಿಟ್ಟು ಬಸ್ ಕ್ಲೀನರ್ ಆತ್ಮಹತ್ಯೆ

Update: 2019-12-13 14:15 GMT

ಉಳ್ಳಾಲ: ಡೆತ್‍ನೋಟ್ ಬರೆದು ರೈಲಿನಡಿಗೆ ತಲೆಯಿಟ್ಟು ಬಸ್ ಕ್ಲೀನರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಕಾಪಿಕಾಡ್ ಬಳಿ ಶುಕ್ರವಾರ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕಾಪಿಕಾಡ್ ನಿವಾಸಿ ರತನ್ ಕುಮಾರ್(40) ಎಂದು ಗುರುತಿಸಲಾಗಿದೆ.

ರತನ್ ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಸಾಲ ಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ದಿನದ ಹಿಂದೆ ಬೆಂಗಳೂರಿಗೆ ಹೋಗಿದ್ದ ರತನ್ ಕುಮಾರ್ ಶುಕ್ರವಾರ ಮನೆಗೆ ಬಂದಿದ್ದರು. ಶುಕ್ರವಾರ ಮನೆಗೆ ಹೋಗಲು ರೈಲ್ವೆ ಹಳಿ ದಾಟಿ ಹೋಗಬೇಕಾಗಿದ್ದು, ಹೋಗುವ ದಾರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ರತನ್ ಅವರ ಜೇಬಿನಲ್ಲಿದ್ದ ಡೆತ್‍ನೋಟ್ ರೈಲ್ವೆ ಪೊಲೀಸರಿಗೆ ದೊರೆತಿದೆ. ಅದರಲ್ಲಿ "ನನ್ನ ಸಾವಿಗೆ ಯಾರು ಕಾರಣರಲ್ಲ, ಸಾಲ ಭಾದೆಯಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ" ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರತನ್ ಅವರ ಸಹೋದರ ಸತೀಶ್ ಮದುವೆಯಾಗಿ ಕುಂಪಲ ಬಳಿ ವಾಸವಾಗಿದ್ದು, ರತನ್ ಕುಮಾರ್ ಅವಿವಾಹಿತರಾಗಿದ್ದು, ಕಾಪಿಕಾಡ್ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News