ವಿದ್ಯಾರ್ಥಿಗಳನ್ನು ಕಾಡುತ್ತಿವೆ ಮಾದಕ ದ್ರವ್ಯದ ಸಮಸ್ಯೆಗಳು

Update: 2019-12-13 09:03 GMT

ಮಂಗಳೂರು, ಡಿ.13: ಮಂಗಳೂರು ಮಹಾನಗರ ಪಾಲಿಕೆ ನೇತೃತ್ವದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾದ ಅಧಿಕಾರಿಗಳ ಜತೆಗಿನ ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಬಹುತೇಕರ ಆತಂಕ ಮಾದಕ ದ್ರವ್ಯ, ದೌರ್ಜನ್ಯದ್ದಾಗಿತ್ತು. ಇದಲ್ಲದೆ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆಯೂ ಪ್ರಶ್ನೆಗೆ ಕಾರ್ಯಕ್ರಮ ಅವಕಾಶ ಕಲ್ಪಿಸಿತು.

ಪಾಲಿಕೆಯ ಉಪ ಆಯುಕ್ತೆ ಗಾಯತ್ರಿ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಈ ಮುಖಾಮುಖಿ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಹಲವಾರು ಪ್ರಶ್ನೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೀಣಾ ಎಂಬವರು ಪ್ರಶ್ನಿಸುತ್ತಾ, ಮದ್ಯಪಾನ, ಧೂಮಪಾನದಿಂದಾಗಿ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಪಿಡುಗನ್ನು ಬೇರಿನಿಂತ ಕಿತ್ತು ಹಾಕಬೇಕಾಗಿದೆ. ಇದಕ್ಕಾಗಿ ಮಕ್ಕಳು ಸೇರಿ ರ್ಯಾಲಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಪೊಲೀಸ್ ಆಯುಕ್ತರ ಕಚೇರಿ ಪರವಾಗಿ ಭಾಗವಹಿಸಿದ್ದ ಶ್ರೀಕಲಾ ಮಾತನಾಡಿ, ಗಾಂಜಾ, ಧೂಮಪಾನ ಸೇರಿದಂತೆ ಸಾಕಷ್ಟು ಪ್ರಕರಣಗಳನ್ನು ನಾವು ಪತ್ತೆ ಹಚ್ಚಿ ಕ್ರಮ ಕೈಗೊಲ್ಳುತ್ತೇವೆ. ಮದ್ಯಪಾನ ಕೇರಳದಲ್ಲಿ ಸಂಪೂರ್ಣ ನಿಷೇಧವಿದೆ. ಆದರೆ ಅಲ್ಲಿಯವರು ಇಲ್ಲಿಂದ ಕೊಂಡುಹೋಗುತ್ತಾರೆ. ಒಂದು ಚಟವನ್ನು ನಿಷೇಧಿಸಲು ಮುಂದಾದಾಗ ಅದನ್ನೇ ಹವ್ಯಾಸ ಮಾಡಿಕೊಂಡವರು ಮತ್ತೊಂದು ಚಟವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇದೇ ವೇಳೆ ಕೆಲವೊಂದು ಪ್ರಕರಣಗಳನ್ನು ಬೇಧಿಸುವ ಸಂದರ್ಭ ನಮಗೆ ಹಿರಿಯ ಅಧಿಕಾರಿಗಳು ಅಥವಾ ವ್ಯವಸ್ಥೆಯಿಂದ ಸಹಕಾರ ಸಿಗದೆಯೂ ತೊಂದರೆಯಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಸಂದರ್ಭ ಮನಪಾ ಉಪ ಆಯುಕ್ತೆ ಗಾಯತ್ರಿ ನಾಯಕ್ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಯಾರೂ ಅಡ್ಡಿಪಡಿಸುವುದಿಲ್ಲ. ಆದರೆ ಮಕ್ಕಳಾಗಿರುವುದಿಂದ ಯಾವುದೇ ರೀತಿಯ ರ್ಯಾಲಿ ಮಾಡುವುದಿದ್ದರೂ ಶಾಲೆಯ ಶಿಕ್ಷಕರ ಸಹಕಾರದಲ್ಲಿ ಮಾಡಬಹುದಾಗಿದೆ ಎಂದರು.

ಜಾಹೀರಾತುಗಳಲ್ಲಿ ಮದ್ಯಪಾನ, ಧೂಮಪಾನ ನಿಷೇಧ ಎಂದು ಹೇಳಲಾಗುತ್ತದೆ. ಆದರೆ ಅವುಗಳು ಮಾತ್ರ ಸುಲಭವಾಗಿ ಮಕ್ಕಳಿಗೂ ಸಿಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ದಂಡ ಹಾಕುವುದಾಗಿ ಹೇಳುತ್ತೀರಿ. ದಂಡವನ್ನು ಕೊಡುತ್ತಾರೆ ಮತ್ತೆ ಮುಂದುವರಿಸುತ್ತಾರಲ್ಲ ಎಂದು ಬೊಕ್ಕಪಟ್ಣ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಕಿರಣ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗಾಯತ್ರಿ ನಾಯಕ್, ಮಕ್ಕಳು ತಮ್ಮ ಹಂತದಲ್ಲಿ ಮಾದಕ ದ್ರವ್ಯ ವ್ಯಸಗಳಿಂದ ದೂರವಿರುವ ಪ್ರಜ್ಞೆಯನ್ನು ತಾವೇ ಬೆಳೆಸಿಕೊಳ್ಳಬೇಕು. ಪೋಷಕರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ, ಜೀವಾವಧಿಯಂತಹ ಶಿಕ್ಷೆ ತಕ್ಷಣ ಯಾಕೆ ದೊರೆಯುವುದಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸಿದರು. ಇದು ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣವಾದ ವಿಷಯ. ಇಂತಹ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬುದು ಎಲ್ಲರ ಬಯಕೆ. ಆದರೆ ನಾವು ಸಂವಿಧಾನದಡಿ ಬದುಕುತ್ತಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಇಂತಹ ದುಷ್ಕೃತ್ಯಗಳಿಗೆ ಶಿಕ್ಷೆ ಆಗಬೇಕು. ನೇರವಾಗಿ ಯಾರನ್ನೂ ಗಲ್ಲಿಗೇರಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಇಂತಹ ವ್ಯವಸ್ಥೆಯಿಂದ ತಾತ್ಕಾಲಿಕವಾಗಿ ಭಯ ಹುಟ್ಟಿಸಬಹುದು. ಆದರೆ ಇದು ಕಾನೂನು ಆಗಿ ಬರಬೇಕೇ ಹೊರತು ಯಾರೂ ಕಾನೂನು ಕೈಗೆತ್ತಿಕೊಳ್ಳುವಂತಾಗಬಾರದು. ಇತ್ತೀಚೆಗೆ ನಡೆದ ಪ್ರಕರಣ ಚರ್ಚೆಗೆ ಒಳ್ಳೆಯ ಅವಕಾಶ ನೀಡಿದೆ. ಹಾಗಾಗಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ಕಾನೂನು ರೂಪುಗೊಳ್ಳಬೇಕಿದೆ ಎಂದರು.

ಕಾರ್‌ಸ್ಟ್ರೀಟ್ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಾವೇರಿ, ಸರಕಾರ ಶಿಕ್ಷಣಕ್ಕೆ ಪೋತ್ಸಾಹ ನೀಡುತ್ತಿದೆ, ಮೂಲಭೂತ ಸೌಕರ್ಯ ಕಲ್ಪಿಸುತ್ತಿದೆ ಎಂದು ಹೇಳುತ್ತಿದೆಯಾದರೂ ಸರಕಾರಿ ಕಾಲೇಜುಗಳಲ್ಲಿ ಅತ್ಯಗತ್ಯವಾದ ಶೌಚಾಲಯ, ಪ್ರಯೋಗಾಲಯಗಳೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸುವಂತೆ ಗಾಯತ್ರಿ ನಾಯಕ್ ಸಭೆಯಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು. ಯಾವುದೋ ಕಾರಣದಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದರೆ ಏನು ಮಾಡಬೇಕೆಂದು ಪೂಜಾ ಎಂಬ ವಿದ್ಯಾರ್ಥಿನಿ ಪ್ರಶ್ನಿಸಿದಾಗ, ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಬಹುದು ಎಂದು ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜಾ ತಿಳಿಸಿದರು.

ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಬಡ್ಡಿ ಇಲ್ಲದೆ ಸಾಲ ದೊರೆಯುವಂತಾಗಬೇಕು ಎಂದು ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಇದು ಪಾಲಿಸಿ ವಿಷಯವಾಗಿರುವುದರಿಂದ ಈ ಬಗ್ಗೆ ಸರಕಾರಕ್ಕೆ ಬರೆಯಬೇಕಾಗಿದೆ ಎಂದು ಗಾಯತ್ರಿ ನಾಯಕ್ ಹೇಳಿದರು.

ರಾಮಕೃಷ್ಣ ಶಾಲೆಯ ವಿದ್ಯಾರ್ಥಿ ಸಾಂಗ್ವಿ ಎಂಬಾಕೆ ನಮ್ಮ ಶಾಲೆಯ ಎದುರು ರಸ್ತೆ ದಾಟುವುದೇ ಸಮಸ್ಯೆ, ಗೇಟ್ ಎದುರು ಒಳಚರಂಡಿ ನೀರು ಸೋರಿಕೆಯಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ತಕ್ಷಣ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ ಗಾಯತ್ರಿ ನಾಯಕ್, ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಯದಿದ್ದರೆ ತನ್ನನ್ನೇ ಖುದ್ದು ಭೇಟಿಯಾಗುವಂತೆ ವಿದ್ಯಾರ್ಥಿನಿಗೆ ತಿಳಿಸಿದರು.

ತ್ಯಾಜ್ಯ ಸಂಗ್ರಹಿಸುವವರು ಸರಿಯಾಗಿ ಶಾಲೆಗೆ ಬರುತ್ತಿಲ್ಲ ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಮನೆ ಹಾಗೂ ಶಾಲೆಯಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯವನ್ನು ಯಾವ ರೀತಿಯಲ್ಲಿ ಸಂಸ್ಕರಿಸಬಹುದು ಎಂಬುದನ್ನು ಮನಪಾ ಪರಿಸರ ಅಭಿಯಂತರ ಮಧು ಮಕ್ಕಳಿಗೆ ವಿವರ ನೀಡಿದರು.

ವಿದ್ಯಾರ್ಥಿನಿ ಮುರ್ಶಿದಾ ಪ್ರಶ್ನಿಸುತ್ತಾ, ಕೆಲ ಸಮುದಾಯಗಳಲ್ಲಿ 10ನೇ ತರಗತಿ ಬಳಿಕ ಹೆಣ್ಣು ಮಕ್ಕಳಿಗೆ ಶಾಲೆಗೆ ಹೋಗಲು ಪ್ರೋತ್ಸಾಹ ನೀಡುವುದಿಲ್ಲ. ಇದಕ್ಕೇನು ಮಾಡುವುದು ಎಂದರು. ಇದೊಂದು ಗಂಭೀರವಾದ ವಿಷಯ. ಈ ಬಗ್ಗೆ ಮನಪಾ ಗಮನ ಹರಿಸಲಿದೆ ಎಂದು ಹೇಳಿದ ಗಾಯತ್ರಿ ನಾಯಕ್ ವಿದ್ಯಾರ್ಥಿನಿಯ ಪೋಷಕರಿಗೆ ಆಕೆಯ ಶಿಕ್ಷಣ ಮುಂದುವರಿಕೆ ಕುರಿತಂತೆ ಮನವರಿಕೆ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಶ್ರೀನಿವಾಸ್, ಮನಪಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ., ಜಿಲ್ಲಾ ಮಹಿಳಾ ರಕ್ಷಣಾ ಘಟಕದ ವೆಂಕಪ್ಪ ಎಂ., ಮಂಗಳೂರು ಉತ್ತರ ಬಿಇಒ ಆಶಾ ನಾಯಕ್, ಕೆಎಸ್ಸಾರ್ಟಿಸಿ ಸಹಾಯಕ ಟ್ರಾಫಿಕ್ ಮ್ಯಾನೇಜರ್ ನಿರ್ಮಲಾ, ಮನಪಾ ವಲಯ ಆಯುಕ್ತ ಅಬ್ದುಲ್ ರಹಿಮಾನ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನರೇಶ್ ಶೆಣೈ, ಇಂಜಿನಿಯರಿಂಗ್ ವಿಭಾಗದ ರಘುಪಾಲ್, ರೋಜ್‌ಗಾರ್ ಯೋಜನೆಯ ಚಿತ್ತರಂಜನ್, ರಿಚರ್ಡ್, ಝಾಕಿರ್‌ಹುಸೇನ್ ಮೊದಲಾದ ಅಧಿಕಾರಿಗಳು ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮನಪಾ ಪರಿಸರ ಅಭಿಯಂತರ ಮಧು ಸ್ವಾಗತಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಕಮಲಾ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News