ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ -ಆಪರೇಟಿವ್ ರಾಜ್ಯಕ್ಕೆ ಮಾದರಿ ಸಹಕಾರಿ ಸಂಸ್ಥೆ: ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು, ಡಿ.14: ರಾಜ್ಯದಲ್ಲಿ ಸಹಕಾರಿ ಸಂಘಗಳ ಪೈಕಿ ಎಲ್ಲಾ ವಿಭಾಗಗಳಲ್ಲಿ ಕಳೆದ 25 ವರ್ಷಗಳಲ್ಲಿ ಯಶಸ್ವಿ ಸಾಧನೆ ಮಾಡಿದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ರಾಜ್ಯಕ್ಕೆ ಮಾದರಿ ಸಹಕಾರಿ ಸಂಸ್ಥೆಯಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಶ್ಲಾಘಿಸಿದ್ದಾರೆ.
ಉರ್ವ ಚರ್ಚ್ ಸೆಂಟಿನರಿ ಹಾಲ್ನಲ್ಲಿಂದು ಆಯೋಜಿಸಿದ್ದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಸುಮಾರು 34 ಸಾವಿರ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಶೇ.10ರಷ್ಟು ಸಹಕಾರಿ ಸಂಘಗಳು ವಿವಿಧ ಕಾರಣಗಳಿಂದ ಸಂಕಷ್ಟ ಎದುರಿಸುತ್ತಿವೆ. ಈ ನಡುವೆ ಎಲ್ಲಾ ವಿಭಾಗಗಳಲ್ಲೂ ಯಶಸ್ಸು ಗಳಿಸಿ ಸಾಧನೆ ಮಾಡಿರುವುದು ಶ್ರೀರಾಮಕ್ರಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಾಧನೆಯಾಗಿದೆ. ಸಹಕಾರಿ ಸಂಘಸಂಸ್ಥೆಗಳ ಪರಸ್ಪರ ಸಹಕಾರ ಸಾಮೂಹಿಕ ಪ್ರಯತ್ನದಿಂದ ಒಟ್ಟಾಗಿ ದುಡಿಯುವ ಮನೋಭಾವದಿಂದ ಬೆಳೆಯಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ಶುಭಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜಯರಾಜ್. ಬಿ.ರೈ, ಮುಂದಿನ ಐದು ವರ್ಷಗಳಲ್ಲಿ ಸಂಸ್ಥೆಯ ಬಂಡವಾಳವನ್ನು 1000 ಕೋಟಿ ರೂ.ಗೆ ಏರಿಸುವ ಮತ್ತು ಸೊಸೈಟಿಯನ್ನು ಅರ್ಬನ್ ಬ್ಯಾಂಕ್ ಆಗಿ ಮಾಡುವ ಗುರಿ ಇದೆ. ಹಾಲಿ 250 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿರುವ ಸಂಸ್ಥೆ 2018-19ರಲ್ಲಿ ಸಂಸ್ಥೆಯ ಪಾಲುದಾರರಿಗೆ ಶೇ.25 ಡಿವಿಡೆಂಡ್ ನೀಡಿದೆ. 5.7 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 11.73 ಕೋಟಿ ರೂ ಕ್ಷೇಮನಿಧಿಯನ್ನು ಹೊಂದಿದೆ ಎಂದು ವಿವರಿಸಿದರು.
25 ಶಾಖೆಗಳನ್ನು ಹೊಂದಿರುವ ಸೊಸೈಟಿ 64,566 ಸದಸ್ಯರನ್ನು ಹೊಂದಿದೆ.ಮೂರು ಬಾರಿ ರಾಜ್ಯ ಪ್ರಶಸ್ತಿ ಹಾಗೂ ಎಂಟು ಬಾರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಪ್ರಶಸ್ತಿಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕ್ನ ಸರ್ವತೋಮುಖ ಬೆಳವಣಿಗೆ ಗೆ ಕಾರಣರಾದ ಸಂಸ್ಥೆಯ ಸಂಸ್ಥಾಪಕರು, ನಿರ್ದೇಶಕ ಋರು, ಪಾಲುದಾರರು, ಗ್ರಾಹಕರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಸದಾನಂದ ಶೆಟ್ಟಿ, ಖ್ಯಾತ ವೈದ್ಯರಾದ ಡಾ.ಶಾಂತರಾಮ ಶೆಟ್ಟಿ, ಉಪಾಧ್ಯಕ್ಷರಾದ ಲಕ್ಷ್ಮೀ ಜಯಪಾಲ ಶೆಟ್ಟಿ, ನಿರ್ದೇಶಕರುಗಳಾದ ರತ್ನಕಾಂತಿ ಶೆಟ್ಟಿ, ಕೆ.ಸೀತಾರಾಮ ರೈ, ಡಾ.ಕೆ.ಸುಭಾಶ್ಚಂದ್ರ ಶೆಟ್ಟಿ, ಪಿ.ಶಿವರಾಮ ಅಡ್ಯಂತಾಯ, ಎಚ್.ಆರ್.ಶೆಟ್ಟಿ, ವಿಠಲ ಪಿ. ಶೆಟ್ಟಿ, ಎಂ.ರಾಮಯ್ಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ.ದಿವಾಕರ ರೈ,ರವೀಂದ್ರ ನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ ಆಳ್ವ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ.ಎಂ.ಸುಧಾಕರ ಶೆಟ್ಟಿ, ಸಹಕಾರಿ ಸಂಘಗಳ ಜಂಟಿ ನಿರ್ದೇಶಕ ಪ್ರಕಾಶ್ ರಾವ್, ಉಪ ನಿಬಂಧಕ ಪ್ರವಿಣ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಸೊಸೈಟಿಯ ಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು.
ಮಹಾಪ್ರಬಂಧಕ ಗಣೇಶ್ ಜಿ.ಕೆ. ಸಂಸ್ಥೆಯ ಸ್ಥಾಪಕ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸವಣೂರು ಸೀತಾರಾಮ ರೈ ಸ್ವಾಗತಿಸಿದರು. ದಿವಾಕರ ರೈ ವಂದಿಸಿದರು. ದಿಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.