ಸಿಎಎ ಪ್ರತಿಭಟನಾಕಾರರಿಗೆ 'ಪಾಕಿಸ್ತಾನಕ್ಕೆ ಹೋಗಿ' ಎಂದ ಪೊಲೀಸ್ ಅಧಿಕಾರಿ !

Update: 2019-12-28 08:50 GMT
ಫೈಲ್ ಚಿತ್ರ

ಲಕ್ನೋ :  ಕಳೆದ ಶುಕ್ರವಾರ ಮೀರತ್‍ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುತ್ತಿದ್ದ ಮೀರತ್ ಎಸ್‍ಪಿ ಅಖಿಲೇಶ್ ನಾರಾಯಣ್ ಸಿಂಗ್ 'ಪಾಕಿಸ್ತಾನಕ್ಕೆ ಹೋಗಿ' ಎಂದು ಆಕ್ರೋಶದಿಂದ ಹೇಳುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ.

ಯಾರೋ ತಮ್ಮ ಮೊಬೈಲ್ ಫೋನ್‍ನಲ್ಲಿ ಚಿತ್ರೀಕರಿಸಿದ ಈ ವೀಡಿಯೊದಲ್ಲಿ ಮೀರತ್‍ನ ಇಕ್ಕಟ್ಟಾದ ಗಲ್ಲಿಯೊಂದರಲ್ಲಿ ಕೆಲವು ಇತರ ಪೊಲೀಸ್ ಸಿಬ್ಬಂದಿಗಳೊಂದಿಗೆ ಸಾಗುತ್ತಿದ್ದ ಸಿಂಗ್ ಒಂದು ಕಡೆ ಸ್ಕಲ್ ಕ್ಯಾಪ್ ಧರಿಸಿದ್ದ ಕೆಲ ವ್ಯಕ್ತಿಗಳು ನಿಂತಿದ್ದ ಕಡೆಗೆ ಬಂದು ''ನೀವೆಲ್ಲಿ  ಹೋಗುತ್ತೀರಿ ? ಈ ಗಲ್ಲಿಯನ್ನೀಗ ಸರಿ ಪಡಿಸುತ್ತೇನೆ. ನೀವು ನನಗೊಂದು ಅವಕಾಶ ಕೊಟ್ಟಿದ್ದೀರಿ'' ಎಂದು ಹೇಳುವುದು ಕೇಳಿಸುತ್ತದೆ.

ಆಗ ಅಲ್ಲಿದ್ದವರೊಬ್ಬರು ''ನಾವು ನಮಾಝ್ ಸಲ್ಲಿಸುತ್ತಿದ್ದೇವೆ ಅಷ್ಟೇ'' ಎಂದಾಗ, ಸಿಂಗ್ ''ಅದು ಸರಿ ಆದರೆ ನೀವು ಧರಿಸಿರುವ ಈ ಕಪ್ಪು ಮತ್ತು ನೀಲಿ ಪಟ್ಟಿಗಳು, ಅವರಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳಿ. ಇಲ್ಲಿರಲು ಬಯಸದೇ ಇದ್ದರೆ ಹೋಗಿ ಬಿಡಿ.  ನೀವು ಇಲ್ಲಿ ಬರುತ್ತೀರಿ ಆದರೆ ಬೇರೆ ಯಾರದ್ದೋ ಗುಣಗಾನ ಮಾಡುತ್ತೀರಿ,'' ಎಂದು ಆ ಪೊಲೀಸ್ ಅಧಿಕಾರಿ ಆ ಎರಡು ನಿಮಿಷ ಅವಧಿಯ ವೀಡಿಯೊದಲ್ಲಿ  ಹೇಳುವುದು ಕೇಳಿಸುತ್ತದೆ.

ಆ ಅಧಿಕಾರಿ ಮತ್ತು ಇತರ ಪೊಲೀಸರು ಅಲ್ಲಿಂದ ಹೋದರೂ ಮತ್ತೆ ಅಲ್ಲಿಗೆ ಕನಿಷ್ಠ ಮೂರು ಬಾರಿ ಬಂದು ''ಪ್ರತಿ ಮನೆಯ ಪ್ರತಿ ವ್ಯಕ್ತಿಯನ್ನು ಜೈಲಿಗೆಸೆಯುತ್ತೇನೆ, ಎಲ್ಲರನ್ನೂ ನಾಶ ಪಡಿಸುತ್ತೇನೆ'' ಎಂದು ಹೇಳುತ್ತಿರುವುದೂ ದಾಖಲಾಗಿದೆ.

ಯಾವ ಸನ್ನಿವೇಶದಲ್ಲಿ ಅಧಿಕಾರಿ ಈ ರೀತಿ ಕಿಡಿ ಕಾರಿದ್ದಾರೆಂದು ನಿಖರವಾಗಿ ತಿಳಿದಿಲ್ಲವಾದರೂ ಕೆಲವರು ಪಾಕ್ ಪರ ಘೋಷಣೆಗಳನ್ನು ಕೂಗುತ್ತಿದ್ದುದಕ್ಕೆ ತಾನು ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾಗಿ ಸಿಂಗ್ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News