ಮಂಗಳೂರಿನಿಂದ ಹೊರಟ ಬೋಟು ಲಕ್ಷದ್ವೀಪದಲ್ಲಿ ಮುಳುಗಡೆ: ಏಳು ಕಾರ್ಮಿಕರ ರಕ್ಷಣೆ

Update: 2020-01-01 14:25 GMT
ಲಕ್ಷದ್ವೀಪದ ಕಿಲ್ತಾನ್ ದ್ವೀಪ ಸಮೀಪ ಮುಳುಗಡೆಯಾಗುತ್ತಿರುವ ಬೋಟ್
 

ಮಂಗಳೂರು, ಜ.1: ಮಂಗಳೂರು ಹಳೆ ಬಂದರಿನಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಲಕ್ಷದ್ವೀಪಕ್ಕೆ ಸಾಗಾಟ ಮಾಡುತ್ತಿದ್ದ ಬೃಹತ್ ದೋಣಿಯೊಂದು ಲಕ್ಷದ್ವೀಪದ ಕಿಲ್ತಾನ್ ದ್ವೀಪದ ಬಳಿಯ ಸಮುದ್ರದಲ್ಲಿ ಭಾಗಶಃ ಮುಳುಗಡೆಯಾಗಿದ್ದು, ಅದರಲ್ಲಿದ್ದ ಏಳು ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

‘ಫೈಸಲ್ ಹುಸೈನ್’ ಹೆಸರಿನ ಈ ಬೋಟ್ ಲಕ್ಷದ್ವೀಪ ಮೂಲದ ಜಾಬಿರ್ ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಮಂಗಳೂರು ಹಳೆ ಬಂದರಿನಿಂದ 700 ಚೀಲ ಸಿಮೆಂಟ್, ಸಿಮೆಂಟ್‌ನಿಂದ ತಯಾರಿಸಿದ 400 ಬ್ಲಾಕ್‌ಇಟ್ಟಿಗೆ, 1,000 ಚೀಲ ಜಲ್ಲಿ, ಎಂ-ಸ್ಯಾಂಡ್, ಸ್ಟೀಲ್ ಹೊತ್ತುಕೊಂಡು ಈ ಬೋಟ್ ಲಕ್ಷದ್ವೀಪದ ಕಡೆಗೆ ಪ್ರಯಾಣ ಬೆಳೆಸಿತ್ತು.

ಮಂಗಳವಾರ ನಸುಕಿನಜಾವ 4 ಗಂಟೆ ಸುಮಾರಿಗೆ ದಾರಿಮಧ್ಯೆ ಬೋಟಿನೊಳಗೆ ನೀರು ನುಗ್ಗಿತು. ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ದ್ವೀಪಗಳಲ್ಲೊಂದಾಗಿರುವ ಕಿಲ್ತಾನ್ ದ್ವೀಪದ ಬಳಿಯ ಸಮುದ್ರದಲ್ಲೇ ಬೋಟನ್ನು ಲಂಗರು ಹಾಕಲಾಯಿತಾದರೂ ಬೋಟು ಭಾಗಶಃ ನೀರಿನಲ್ಲಿ ಮುಳುಗಿತು. ಲಕ್ಷದ್ವೀಪದ ತನ್ನ ಗುರಿಯತ್ತ ತಲುಪಲು ಬೋಟು ಇನ್ನು ನಾಲ್ಕು ಗಂಟೆ ಪ್ರಯಾಣಿಸಲು ಬಾಕಿಯಿತ್ತು. ಅಷ್ಟರಲ್ಲೇ ಈ ಅವಘಡ ಸಂಭವಿಸಿದೆ.

‘ಘಟನೆ ಬಗ್ಗೆ ಕೂಡಲೇ ಲಕ್ಷದ್ವೀಪದ ಜನರಿಗೆ ಮಾಹಿತಿ ನೀಡಲಾಗಿದ್ದು, ಅಲ್ಲಿಂದ ದೋಣಿಯಲ್ಲಿ ಬಂದ ತಂಡವೊಂದು ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಎಲ್ಲ ಏಳು ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಬೋಟು ಭಾಗಶಃ ಮುಳುಗಿರುವುದರಿಂದ ದಡಕ್ಕೆ ಕೊಂಡೊಯ್ಯಲು ಅಸಾಧ್ಯ ಎಂಬ ಸ್ಥಿತಿಯಲ್ಲಿದೆ. ಅದರಲ್ಲಿದ್ದ ಲಕ್ಷಾಂತರ ರೂ. ಕಟ್ಟಡ ನಿರ್ಮಾಣ ಸಾಮಗ್ರಿಗಳು ನೀರುಪಾಲಾಗುತ್ತಿದ್ದು, ಅದು ಉಳಿಯುವ ಭರವಸೆಯಿಲ್ಲ’ ಎಂದು ಮಂಗಳೂರು ಹಳೆ ಬಂದರ್‌ನ ಬಳಕೆದಾರರ ಅಸೋಸಿಯೇಶನ್‌ನ ಕಾರ್ಯದರ್ಶಿ ಅಬ್ದುಲ್ ಲತೀಫ್ ತಿಳಿಸಿದ್ದಾರೆ.

ಅರಬ್ಬಿ ಸಮುದ್ರ ಮಧ್ಯೆ ಇರುವ ಭಾರತದ ಭೂಪ್ರದೇಶವಾದ ಲಕ್ಷದ್ವೀಪಕ್ಕೆ ಬಹುತೇಕ ಸಾಮಗ್ರಿಗಳನ್ನು ಕೇರಳದ ಕೊಚ್ಚಿ ಮತ್ತು ಬೇಪೋರ್ ಬಂದರು ಮತ್ತು ಮಂಗಳೂರು ಹಳೆ ಬಂದರಿನಿಂದ ರವಾನೆಯಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News