×
Ad

‘ರಾಡ್ ಹಿಡಿದವರು ನಮ್ಮ ಸದಸ್ಯರು’: ಟಿವಿ ಚರ್ಚೆಯಲ್ಲಿ ಒಪ್ಪಿಕೊಂಡ ಎಬಿವಿಪಿ ನಾಯಕ

Update: 2020-01-07 21:20 IST

ಹೊಸದಿಲ್ಲಿ, ಜ. 7: ವೀಡಿಯೊದಲ್ಲಿ ಕಂಡು ಬಂದ ಕಬ್ಬಿಣದ ರಾಡ್‌ಗಳನ್ನು ಹಿಡಿದುಕೊಡಿರುವ ಇಬ್ಬರು ವ್ಯಕ್ತಿಗಳು ಎಬಿವಿಪಿಗೆ ಸೇರಿದವರು ಎಂದು ರಾಷ್ಟ್ರೀಯ ಟೆಲಿವಿಶನ್‌ನ ಜೆಎನ್‌ಯು ಹಿಂಸಾಚಾರದ ಕುರಿತ ಚರ್ಚೆಯ ಸಂದರ್ಭ ಎಬಿವಿಪಿಯ ದಿಲ್ಲಿ ಜಂಟಿ ಕಾರ್ಯದರ್ಶಿ ಅನಿಮಾ ಸೋಂಕರ್ ಒಪ್ಪಿಕೊಂಡಿದ್ದಾರೆ.

ಟೈಮ್ಸ್ ನೌನ ಪ್ಯಾನಲ್ ಚರ್ಚೆಯಲ್ಲಿ ಸೋಂಕರ್, ಇಬ್ಬರು ಕೂಡ ಸ್ವರಕ್ಷಣೆಗೆ ಕಬ್ಬಿಣದ ರಾಡ್‌ಗಳನ್ನು ಹಿಡಿದುಕೊಂಡಿದ್ದರು ಎಂದು ಹೇಳಿದರು. ಜೆಎನ್‌ಯು ಕ್ಯಾಂಪಸ್‌ನಲ್ಲಿ ರವಿವಾರ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರದ ಕುರಿತು ವೈರಲ್ ಆಗುತ್ತಿರುವ ವೀಡಿಯೊ ಕುರಿತು ವಿವರಣೆ ಕೋರಿದಾಗ ಸೋಂಕರ್, ಹೊರಗೆ ಅಡಿ ಇರಿಸುವ ಮೊದಲು ಅವರಿಬ್ಬರು ವಾಟ್ಸ್‌ಆ್ಯಪ್ ಗುಂಪಿನ ಅನುಮತಿ ಕೋರಿದ್ದರು ಎಂದರು.

‘‘ಎಲ್ಲ ವಾಟ್ಸ್ ಆ್ಯಪ್ ಗುಂಪಿನ ತುಂಬಾ ಭೀತಿ ಹರಡಿತ್ತು. ನೀವು ಹೊರಗಿಳಿಯುವಾಗ, ಗುಂಪಾಗಿ ಹೊರಗಿಳಿಯಿರಿ, ಕಬ್ಬಿಣ ರಾಡ್ ಕೈಯಲ್ಲಿದ್ದರೆ ಮಾತ್ರ ಹೊರಗಿಳಿಯಿರಿ...ಪೆಪ್ಪರ್ ಸ್ಪ್ರೇ, ಆ್ಯಸಿಡ್...ನಿಮ್ಮ ಕೈಗೆ ಏನು ಸಿಗುತ್ತದೆಯೊ ಅದನ್ನು ಹಿಡಿದುಕೊಳ್ಳಿ ಎಂದಿದ್ದರು. ಆದರೆ, ಆ್ಯಸಿಡ್ ದಾಳಿಯ ಯಾವುದೇ ಪ್ರಕರಣವನ್ನು ನಾನು ಕೇಳಿಲ್ಲ ಅಥವಾ ನೋಡಿಲ್ಲ ಎಂದು” ಅವರು ಹೇಳಿದ್ದಾರೆ. ವೀಡಿಯೊದಲ್ಲಿ ಕಂಡು ಬಂದ ವ್ಯಕ್ತಿಗಳು ಎಬಿವಿಪಿಯವರು ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಂಕರ್, ‘‘ಹೌದು ವಿಕಾಸ್ ಪಟೇಲ್ ನಮ್ಮ ಕಾರ್ಯಕರ್ತ. ನಾನು ನಿರಾಕರಿಸುತ್ತಿಲ್ಲ... ಇದು ಸ್ವರಕ್ಷಣೆ, ಸಂಪೂರ್ಣ ಸ್ವರಕ್ಷಣೆ’’ ಎಂದು ಅವರು ತಿಳಿಸಿದ್ದಾರೆ.

ಹೊರಗೆ ಹೋಗುವವರು ಶಸ್ತ್ರ ಸಜ್ಜಿತರಾಗಿ ಹೋಗಿ ಎಂದು ಯಾರು ಹೇಳಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಸೋಂಕರ್, ‘‘ಬ್ರಹ್ಮಪುತ್ರಾ ಹಾಸ್ಟೆಲ್‌ನ ಎಲ್ಲರೂ ಹೇಳಿದರು. ಎಬಿವಿಪಿಯವರು ಹೇಳಿಲ್ಲ’’ ಎಂದರು.

ಸೋಂಕರ್‌ನ ಹೇಳಿಕೆ ಎಬಿವಿಪಿ ಪ್ರತಿಪಾದನೆ ತದ್ವಿರುದ್ಧವಾಗಿದೆ. ಕ್ಯಾಂಪಸ್ ಒಳಗಡೆ ತನ್ನ ಸದಸ್ಯರು ಶಸ್ತ್ರಾಸ್ತ್ರ ಹೊಂದಿರಲಿಲ್ಲ. ವೈರಲ್ ಆದ ವಾಟ್ಸ್ ಆ್ಯಪ್ ಗುಂಪು, ಸ್ಕ್ರೀನ್ ಶಾಟ್‌ಗಳು ಎಡಪಂಥೀಯ ವಿದ್ಯಾರ್ಥಿಗಳಿಗೆ ಸೇರಿದ್ದು ಎಂದು ಎಬಿವಿಪಿ ಪ್ರತಿಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News