×
Ad

ದೇಶವ್ಯಾಪಿ ಕಾರ್ಮಿಕರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

Update: 2020-01-08 22:58 IST

ಹೊಸದಿಲ್ಲಿ, ಜ. 8: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಒಕ್ಕೂಟಗಳು ಬುಧವಾರ ಕರೆ ನೀಡಿದ್ದ ಒಂದು ದಿನದ ದೇಶವ್ಯಾಪಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

10 ಕೇಂದ್ರ ಸಂಘಟನೆಗಳಾದ ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲುಎ, ಎಐಸಿಸಿಟಿಯು, ಎಲ್‌ಪಿಎಫ್, ಯುಟಿಯುಸಿ ಅಲ್ಲದೆ ವಿವಿಧ ವಲಯ ಸ್ವತಂತ್ರ ಒಕ್ಕೂಟ ಹಾಗೂ ಸಂಘಟನೆಗಳು ಈ ಬಂದ್‌ಗೆ ಕರೆ ನೀಡಿದ್ದವು. ಪಶ್ಚಿಮಬಂಗಾಳದ ವಿವಿಧ ಭಾಗಗಳಲ್ಲಿ ಹಿಂಸಾಚಾರ ಹಾಗೂ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ.

ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಹಾಗೂ ಎಡರಂಗದ ಸುಮಾರು 55 ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಯಂಬತ್ತೂರಿನಲ್ಲಿ ಸಂಸದರು ಸೇರಿದಂತೆ 800 ಮಂದಿ, ತ್ರಿಪುರಾದದಲ್ಲಿ 125 ಮಂದಿ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಜಸ್ಥಾನದಲ್ಲಿ ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳ ಕಾರ್ಯಾಚರಣೆಗೆ ತೊಂದರೆ ಉಂಟಾಗಿವೆ. ಬಸ್, ಆಟೋರಿಕ್ಷಾ ಸೇವೆಗಳಿಗೆ ಭಾಗಶಃ ಅಡ್ಡಿ ಉಂಟಾಗಿದೆ. ಪಂಜಾಬ್ ಹಾಗೂ ಹರ್ಯಾಣದಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ.

 ಇಲ್ಲಿನ ಕೆಲವು ಪ್ರದೇಶಗಳಲ್ಲಿ ಪ್ರತಿಭಟನಕಾರರು ರಸ್ತೆ ಹಾಗೂ ರೈಲು ತಡೆ ನಡೆಸಿದರು. ರಸ್ತೆ ಸಾರಿಗೆ ಸಂಸ್ಥೆಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಸ್‌ಗಳು ಸಂಚರಿಸಲಿಲ್ಲ. ತೆಲಂಗಾಣದಲ್ಲಿ ಬ್ಯಾಂಕಿಂಗ್ ಸೇವೆ ಸ್ಥಗಿತಗೊಂಡಿತ್ತು. ಅಂಗಡಿಮುಂಗಟ್ಟುಗಳು ತೆರೆದಿದ್ದವು. ಸಾರಿಗೆಗೆ ಯಾವುದೇ ಅಡ್ಡಿ ಉಂಟಾಗಲಿಲ್ಲ. ಗುಜರಾತ್‌ನಲ್ಲಿ ಬ್ಯಾಂಕಿಂಗ್ ಸೇವೆಗೆ ಭಾಗಶಃ ಅಡ್ಡಿ ಉಂಟಾಯಿತು. ಹರ್ಯಾಣದ ಮಾನೇಸರ್-ಬವಾಲ್‌ನ ಕೈಗಾರಿಕಾ ವಲಯದಲ್ಲಿ ಹೋಂಡಾ ಮೋಟಾರ್‌ಸೈಕಲ್ ಉತ್ಪಾದನಾ ಘಟಕಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್, ಸಿಪಿಐ ಹಾಗೂ ಸಿಪಿಎಂ ಕಾರ್ಯಕರ್ತರು ರ್ಯಾಲಿ ನಡೆಸಿದರು. ಅಗರ್ತಲದಲ್ಲಿ ಕಾರ್ಮಿಕರ ಮುಷ್ಕರಕ್ಕೆ ವಿರುದ್ಧವಾಗಿ ಬಿಜೆಪಿ ಬೆಂಬಲಿಗರು ಮೋಟಾರು ಸೈಕಲ್ ರ್ಯಾಲಿ ನಡೆಸಿದರು. ಕೇರಳದ ಕೊಚ್ಚಿಯಲ್ಲಿ ಮೆಟ್ರೋ ನಿಲ್ದಾಣಗಳು ನಿರ್ಜನವಾಗಿದ್ದವು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೇರಳದ ಹಲವು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಭಾಗಶಃ ಮುಚ್ಚಿದ್ದವು. ರೈಲು, ಬಸ್ ಹಾಗೂ ಆಟೋರಿಕ್ಷಾ ಸಂಚಾರ ವಿರಳವಾಗಿದ್ದವು. ಮಹಾರಾಷ್ಟ್ರದಲ್ಲಿ ಬಂದ್‌ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಲವು ಜಿಲ್ಲೆಗಳು ಹಾಗೂ ದೇಶದ ಆರ್ಥಿಕ ಕೇಂದ್ರವಾದ ಮುಂಬೈಯಲ್ಲಿ ಸಾರಿಗೆ ಹಾಗೂ ಬ್ಯಾಂಕಿಂಗ್ ಸೇವೆ ಅಭಾದಿತವಾಗಿ ನಡೆಯಿತು. ರಾಜ್ಯದ ಯಾವುದೇ ವಲಯದಲ್ಲಿ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಉಪನಗರದ ರೈಲುಗಳು, ಸರಕಾರಿ ಬಸ್, ಟ್ಯಾಕ್ಸಿ ಹಾಗೂ ಆಟೋರಿಕ್ಷಾಗಳು ನಗರ ಹಾಗೂ ಉಪನಗರಗಳಲ್ಲಿ ಎಂದಿನಂತೆ ಸಂಚರಿಸಿದವು.

 ಮೆಟ್ರೋ ಹಾಗೂ ಮೋನೊ ರೈಲು ಸಂಚಾರಕ್ಕೆ ಕೂಡಾ ಯಾವುದೇ ಅಡ್ಡಿ ಉಂಟಾಗಲಿಲ್ಲ. ಹಿಮಾಚಲ ಪ್ರದೇಶದಲ್ಲಿ ಹಿಮಪಾತದ ಹೊರತಾಗಿಯೂ ಮುಷ್ಕರ ನಡೆಯಿತು. ಹೊಸದಿಲ್ಲಿಯಲ್ಲಿ ಬಂದ್‌ನಿಂದ ಯಾವುದೇ ಪರಿಣಾಮ ಉಂಟಾಗಲಿಲ್ಲ. ಕೈಗಾರಿಕ ಕಾರ್ಮಿಕರು ಮಾತ್ರ ಕೆಲಸದಿಂದ ದೂರ ಉಳಿದಿದ್ದರು. ಮೆಟ್ರೊ ಹಾಗೂ ಟಿಟಿಸಿ ಸೇವೆಗಳು ಎಂದಿನಂತೆ ನಡೆದವು. ದಿಲ್ಲಿಯಲ್ಲಿ ರೈಲು ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ. ಆದರೆ, ಒಡಿಶಾ ಹಾಗೂ ಪಶ್ಚಿಮಬಂಗಾಳಕ್ಕೆ ತೆರಳುವ ಕೆಲವು ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಪ್ರತಿಭಟನಾಕಾರರು ರೈಲು ಹಾಗೂ ರಸ್ತೆ ಸಂಚಾರಕ್ಕೆ ತಡೆ ಒಡ್ಡಿದುದರಿಂದ ಪಶ್ಚಿಮಬಂಗಾಳಧ ಹಲವು ಭಾಗಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪೂರ್ವ ಬರ್ದ್ವಾನ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿಭಟನಕಾರರು ಟಯರ್ ಉರಿಸಿ ರಸ್ತೆ ತಡೆ ನಡೆಸಿದರು. ರೈಲ್ವೆ ಹಳಿಯಲ್ಲಿ ಧರಣಿ ನಡೆಸಿದ ಪರಿಣಾಮ ಈ ವಲಯದಲ್ಲಿ ರೈಲು ಸಂಚಾರಕ್ಕೆ ಅಡ್ಡಿ ಉಂಟಾಯಿತು. ಅಲ್ಲದೆ, ಇಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಸ್‌ಎಫ್‌ಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಹರಿದಾಯ್‌ಪುರ ರೈಲು ನಿಲ್ದಾಣದ ಸಮೀಪ 4 ಕಚ್ಚಾ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News