ನಕಲಿ ವಿವೇಕಾನಂದರ ವಿರುದ್ಧ ಅಸಲಿ ವಿವೇಕಾನಂದ

Update: 2020-01-11 18:29 GMT

ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದೇವೆ. ಸಂಘಪರಿವಾರವಂತೂ ವಿವೇಕಾನಂದರ ಜನ್ಮದಿನಾಚರಣೆಯನ್ನು ಗುತ್ತಿಗೆ ತೆಗೆದುಕೊಂಡು ಅವರ ಹೆಸರನ್ನು ತಮ್ಮ ದುರುದ್ದೇಶಕ್ಕೆ ಬಳಸಿಕೊಳ್ಳಲು ಯಶಸ್ವಿಯಾಗಿವೆ. ಭ್ರಷ್ಟಾಚಾರ, ವೌಢ್ಯ ಇತ್ಯಾದಿಗಳಲ್ಲಿ ತೇಲಿ ಹೋಗಿರುವ ಸರಕಾರ, ವಿವೇಕಾನಂದ ವೌಲ್ಯಗಳನ್ನು ಅಳವಡಿಸಿಕೊಳ್ಳಲು ನಾಡಿನ ಜನತೆಗೆ ಕರೆ ನೀಡುತ್ತಿದೆ. ಹಾಗಾದರೆ ಇವರ ವಿವೇಕಾನಂದರು ಯಾರು? ಅವರು ಹುಟ್ಟಿದ್ದೆಲ್ಲಿ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರಕದೆ ನಾಡಿನ ಜನತೆ ಕಂಗಾಲಾಗಿದ್ದಾರೆ.

ಭಾರತೀಯತೆಗೆ ಮತ್ತು ಹಿಂದುತ್ವಕ್ಕೆ ವಿಶ್ವ ಮಟ್ಟದಲ್ಲಿ ಮಾನ್ಯತೆಯನ್ನು ತಂದುಕೊಟ್ಟವರು ವಿವೇಕಾನಂದರು. ಅವರು ಹಿಂದುತ್ವದ ಹೆಸರಿನಲ್ಲಿ ಆಚರಿಸಲ್ಪಡುವ ಎಲ್ಲ ವೌಢ್ಯಗಳು, ಜಾತೀಯತೆಗಳ ವಿರುದ್ಧ ದಂಗೆಯೆದ್ದ ಸನ್ಯಾಸಿ. ಆದರೆ ಇಂದು ನಡೆಯುತ್ತಿರುವುದೇನು? ಈ ದೇಶವನ್ನು ಒಡೆಯುವುದಕ್ಕಾಗಿ ವಿವೇಕಾನಂದರ ಬಾಯಿಯಲ್ಲಿ ಕೋಮು ವಿಷಕಾರಿ ಹೇಳಿಕೆಗಳನ್ನು ಹೇಳಿಸಲಾಗುತ್ತಿದೆ. ಸಂಘಪರಿವಾರ ಇಂದು ಮತ್ತೆ ಮನು ಸಿದ್ಧಾಂತವನ್ನು, ಜಾತೀಯತೆಯನ್ನು ದೇಶದಲ್ಲಿ ಜಾರಿಗೆ ತರಲು ಹೊಂಚು ಹಾಕುತ್ತಿರುವುದು ಮಾತ್ರವಲ್ಲ, ಅದಕ್ಕಾಗಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿದೆ. ಈ ದೇಶಕ್ಕೆ ಘನತೆಯನ್ನು, ಆತ್ಮಾಭಿಮಾನವನ್ನು ತಂದುಕೊಟ್ಟಂತಹ ವಿವೇಕಾನಂದರನ್ನು ತಮ್ಮ ನೀಚ ಕೆಲಸಗಳಿಗಾಗಿ, ದೇಶವನ್ನು ಒಡೆಯುವ ಕೃತ್ಯಗಳಿಗಾಗಿ ಬಳಸುತ್ತಿರುವುದು ನಿಜಕ್ಕೂ ದುರಂತವಾಗಿದೆ.

ಗೋವು ಮನುಷ್ಯರಿಗಿಂತ ದೊಡ್ಡದು ಎಂದು ಯಾವತ್ತೂ ವಿವೇಕಾನಂದರು ನಂಬಿರಲಿಲ್ಲ. ದೇಶದಲ್ಲಿ ಬರಗಾಲ ತಾಂಡವವಾಡುತ್ತಿದ್ದಾಗ ಬ್ರಾಹ್ಮಣರು ಮತ್ತು ವ್ಯಾಪಾರಿಗಳ ತಂಡವೊಂದು ಅವರನ್ನು ಭೇಟಿಯಾಗಿ ಗೋರಕ್ಷಣೆಗಾಗಿ ಧನಸಹಾಯ ಯಾಚಿಸಿತಂತೆ. ಆದರೆ ವಿವೇಕಾನಂದರು ಅವರಿಗೆ ಛೀಮಾರಿ ಹಾಕಿದರಲ್ಲದೆ ಯಾವ ಧರ್ಮದಲ್ಲಿ ಮನುಷ್ಯರ ಜೀವ ಪ್ರಾಣಿಗಳ ಜೀವಕ್ಕಿಂತ ಬೆಲೆಬಾಳುವುದಿಲ್ಲವೋ, ಅಂತಹ ಧರ್ಮಕ್ಕೆ ನನ್ನ ಧಿಕ್ಕಾರವಿದೆ ಎಂದಿದ್ದರು. ಆದರೆ ಇಂದು ನಡೆಯುತ್ತಿರುವುದು ಅದೇ ಅಲ್ಲವೇ? ಒಂದೆಡೆ ದೇಶ ಅಪೌಷ್ಟಿಕತೆಯಿಂದ ನರಳುತ್ತಿದೆ. ಶೇ. 45ರಷ್ಟು ಅಪೌಷ್ಟಿಕತೆ ದೇಶವನ್ನು ಕಾಡುತ್ತಿರುವುದು ಅವಮಾನ ಎಂದು ಪ್ರಧಾನ ಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಬಡವರ, ಹಸಿದವರ ಬಾಯಿಯಿಂದ ಪ್ರೊಟೀನ್‌ಯುಕ್ತ ಗೋಮಾಂಸವನ್ನು ಕಸಿಯಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಜನರಿಗೆ ನೀಡುವುದಕ್ಕೆ ಮಾತ್ರ ನಮ್ಮಲ್ಲೇನೂ ಇಲ್ಲ.

ಒಂದು ವೇಳೆ ವಿವೇಕಾನಂದರು ಇಂದು ಬದುಕಿದ್ದಿದ್ದರೆ ಅವರು ತಮ್ಮದೇ ಧರ್ಮದ ಮಠಾಧಿಪತಿಗಳ, ಸಂಘಪರಿವಾರದ ವಿರುದ್ಧ ಹೋರಾಟಕ್ಕಿಳಿಯುತ್ತಿದ್ದರೋ ಏನೋ? ಮಡೆಸ್ನಾನವನ್ನು ಸಮರ್ಥಿಸುವಂತಹ ಸ್ವಾಮೀಜಿಗಳು ಹಾಗೂ ರಾಜಕಾರಣಿಗಳ ಬಗ್ಗೆ ವಿವೇಕಾನಂದರ ನಿಲುವು ಏನಿರುತ್ತಿತ್ತು ಎನ್ನುವುದನ್ನು ನಾವಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಯುವಕರಲ್ಲಿ, ದೇಶದ ಜನರಲ್ಲಿ ಸ್ವಾಭಿಮಾನವನ್ನು, ಆತ್ಮಾಭಿಮಾನವನ್ನು ಬಿತ್ತುತ್ತಿದ್ದವರು ಸ್ವಾಮಿ ವಿವೇಕಾನಂದರು. ಶಾಸ್ತ್ರ, ಸಂಪ್ರದಾಯದ ಹೆಸರಿನಲ್ಲಿ ಇನ್ನೊಬ್ಬರ ಎಂಜಲ ಮೇಲೆ ಹೊರಳಾಡುವುದನ್ನು ನೋಡಿದರೆ ವಿವೇಕಾನಂದರು ಕೆಂಡವಾಗುತ್ತಿದ್ದರು. ಇದನ್ನು ನಮ್ಮ ರಾಜಕಾರಣಿಗಳು ಮತ್ತು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು.

ದೇಶ ಬಡತನದಲ್ಲಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಮ್ಮ ಮಠಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಕೋಟಿ ಕೋಟಿ ಬೆಲೆಬಾಳುವ ನಗ, ನಗದು ಕೊಳೆಯುತ್ತಾ ಬಿದ್ದಿವೆ. ಬಹುಶಃ ವಿವೇಕಾನಂದರು ಇಂದು ಬದುಕಿದ್ದಿದ್ದರೆ ಯುವಜನರನ್ನು ಒಂದು ಗೂಡಿಸಿ ಇವನ್ನು ಹೊರಗೆ ತರುತ್ತಿದ್ದರು. ದೇಶ ಕಟ್ಟಲು ಬಳಸುತ್ತಿದ್ದರು. ನಮ್ಮ ಸ್ವಾಮೀಜಿಗಳು ಹಿಂದುತ್ವವನ್ನು ಬೋಧಿಸುತ್ತಲೇ, ಕೋಟಿ ಕೋಟಿ ದೋಚುತ್ತಿರುವ ರಾಜಕಾರಣಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ವಿವೇಕಾನಂದರು ಇಂದು ಬದುಕಿದ್ದಿದ್ದರೆ ಏಕಕಾಲದಲ್ಲಿ ಈ ಸ್ವಾಮೀಜಿಗಳ ಮತ್ತು ರಾಜಕಾರಣಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದರು. ಹಿಂದುತ್ವವೆಂದರೆ ಬದುಕುವ ಕ್ರಮ ಎಂದು ವಿವೇಕಾನಂದರು ನಂಬಿದ್ದರು. ಆದರೆ ಬದುಕುವ ಕ್ರಮ ಅಂದರೆ ಏನು? ಬ್ರಾಹ್ಮಣರ ಎಂಜಲಲ್ಲಿ ಕೆಳವರ್ಗದ ಜನರು ಹೊರಳಾಡುವುದೇ? ದಲಿತರು ದೇವಸ್ಥಾನದಿಂದ ಹೊರಗೆ ನಿಲ್ಲುವುದೇ? ರಾಜಕಾರಣಿಗಳ ಭ್ರಷ್ಟಾಚಾರವನ್ನು ಸ್ವಾಮೀಜಿಗಳು ರಕ್ಷಿಸುವುದೇ? ಉಣ್ಣುವುದರಲ್ಲೂ ಪಂಕ್ತಿ ಭೇದ ಮಾಡುವುದೇ? ದಲಿತರನ್ನು ಜೀವಂತವಾಗಿ ಸುಡುವುದೇ? ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿಕಟ್ಟಲು ಪಾಕಿಸ್ತಾನ ಧ್ವಜವನ್ನು ಹಾರಿಸುವುದೇ? ರೈಲುಗಳಿಗೆ ಬಾಂಬಿಟ್ಟು ಅಮಾಯಕರನ್ನು ಕೊಲ್ಲುವುದೇ? ಗೋ ರಕ್ಷಣೆಯ ಹೆಸರಿನಲ್ಲಿ ಬಡವರನ್ನು ಥಳಿಸಿ, ದರೋಡೆ ಮಾಡುವುದೇ? ಗೋವಿಗಾಗಿ ಮನುಷ್ಯರ ಪ್ರಾಣವನ್ನು ತೆಗೆಯುವುದೇ? ಇವೆಲ್ಲವನ್ನು ಬದುಕುವ ಕ್ರಮ ಎಂದು ಯಾರು ತಾನೆ ಒಪ್ಪಿಕೊಂಡಾರು? ಹಿಂದುತ್ವದ ಪುನರುತ್ಥಾನ ಎಂದರೆ ಅದನ್ನು ಮನುಷ್ಯರು ಜೀವಿಸುವ ಧರ್ಮವಾಗಿ ಪರಿವರ್ತಿಸುವುದು ಎಂದು ವಿವೇಕಾನಂದರು ನಂಬಿದ್ದರು. ಆದರೆ ಇಂದು ಸಂಘಪರಿವಾರದವರು ವಿವೇಕಾನಂದರ ಆ ಕನಸನ್ನು ಧ್ವಂಸಗೊಳಿಸುತ್ತಿದ್ದಾರೆ. ವಿವೇಕಾನಂದರ ಭಾವಚಿತ್ರವನ್ನು ಮುಂದಿಟ್ಟುಕೊಂಡೇ ಅವರ ವೌಲ್ಯಗಳನ್ನು ನಾಶ ಮಾಡುತ್ತಿದ್ದಾರೆ.

ಹಿಂದುತ್ವದ ಹೆಸರಿನಲ್ಲಿ ಸಂಘಪರಿವಾರ ಮಾಡುತ್ತಿರುವ ಅನಾಚಾರ, ಅಕ್ರಮಗಳಿಗೆ ಗಾಂಧಿ, ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರು ಪರಿಹಾರ. ನಿಜವಾದ ವಿವೇಕಾನಂದರನ್ನು, ಗಾಂಧಿಯನ್ನು, ಅಂಬೇಡ್ಕರ್‌ರನ್ನು ಯುವಜನರ ಮುಂದಿಡುವುದು ಪ್ರಜ್ಞಾವಂತರ ಕರ್ತವ್ಯ. ಅದುವೇ ಭಾರತ ಎದುರಿಸುತ್ತಿರುವ ಎಲ್ಲ ಬಿಕ್ಕಟ್ಟುಗಳಿಗೆ ಪರಿಹಾರ. ವಿವೇಕಾನಂದರ ಜನ್ಮದಿನದ ಈ ಸುಸಂದರ್ಭದಲ್ಲಿ ಆ ಮಹಾನಾಯಕರ ಕನಸುಗಳನ್ನು ನನಸು ಮಾಡಲು ನಾವು ಹೆಜ್ಜೆಗಳನ್ನಿಡಬೇಕಾಗಿದೆ.

Writer - ಅವನೀಂದ್ರ

contributor

Editor - ಅವನೀಂದ್ರ

contributor

Similar News