ತಾಲಿಬಾನಿ ಶೈಲಿಯಲ್ಲಿ ದೇಶವನ್ನು ನಡೆಸಲು ಸಾಧ್ಯವಿಲ್ಲ: ಶಿವಸೇನೆ
ಮುಂಬೈ,ಜ.12: ಇತ್ತೀಚಿಗೆ ಶಸ್ತ್ರಸಜ್ಜಿತ ದಾಳಿಕೋರರಿಂದ ಹಲ್ಲೆಗೆ ಗುರಿಯಾಗಿದ್ದ ವಿದ್ಯಾರ್ಥಿಗಳೊಂದಿಗೆ ಏಕತೆ ವ್ಯಕ್ತಪಡಿಸಲು ದಿಲ್ಲಿಯ ಜೆಎನ್ಯು ವಿವಿಗೆ ಭೇಟಿ ನೀಡಿದ್ದಕ್ಕಾಗಿ ಬಿಜೆಪಿ ಮತ್ತು ಇತರ ಕೆಲವು ವರ್ಗಗಳಿಂದ ಟೀಕೆಗೆ ಗುರಿಯಾಗಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಶಿವಸೇನೆಯು ಬೆಂಬಲಿಸಿದೆ.
ರವಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಿರಿಯ ಶಿವಸೇನೆ ನಾಯಕ ಸಂಜಯ ರಾವತ್ ಅವರು,ದೇಶವನ್ನು ತಾಲಿಬಾನಿ ಶೈಲಿಯಲ್ಲಿ ನಡೆಸಲು ಸಾಧ್ಯವಿಲ್ಲ. ದೀಪಿಕಾ ಮತ್ತು ಅವರ ಚಿತ್ರ ‘ಛಪಕ್’ ಬಹಿಷ್ಕಾರಕ್ಕೆ ಕರೆ ನೀಡಿರುವುದು ತಪ್ಪು ಎಂದು ಹೇಳಿದರು.
ಜೆಎನ್ಯು ವಿವಿಗೆ ದೀಪಿಕಾ ಭೇಟಿಯನ್ನು ಹಲವರು ಪ್ರಶಂಸಿಸಿದ್ದರೆ ಬಿಜೆಪಿ ಮತ್ತು ಇತರ ಕೆಲವು ವರ್ಗಗಳು ‘ಎಡಪಂಥೀಯರನ್ನು ಬೆಂಬಲಿಸಿದ್ದಕ್ಕಾಗಿ ’ಅವರನ್ನು ಟೀಕಿಸಿದ್ದವು. ಇದು ತನ್ನ ‘ಛಪಕ್’ ಚಿತ್ರದ ಪ್ರಚಾರಕ್ಕಾಗಿ ದೀಪಿಕಾರ ತಂತ್ರವಾಗಿತ್ತು ಎಂದು ಜರಿದಿದ್ದವು. ಕೆಲವರು ಚಿತ್ರದ ಬಹಿಷ್ಕಾರಕ್ಕೂ ಆಗ್ರಹಿಸಿದ್ದರು.
ಆ್ಯಸಿಡ್ ದಾಳಿ ಸಂತ್ರಸ್ತೆಯ ಕತೆಯನ್ನು ಹೊಂದಿರುವ ‘ಛಪಕ್’ ಶುಕ್ರವಾರ ದೇಶಾದ್ಯಂತ ಬಿಡುಗಡೆಗೊಂಡಿದೆ.