ನಮಾಝ್ ಗೆಂದು ಹೋದ ತಂದೆಗೆ ನನ್ನ ಕಣ್ಣೆದುರೇ ಗುಂಡಿಕ್ಕಿದರು: ಜಲೀಲ್ ಪುತ್ರಿ ಶಿಫಾನಿ

Update: 2020-01-13 17:20 GMT

ಮಂಗಳೂರು: ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರ, ಪೊಲೀಸ್ ಗೋಲಿಬಾರ್ ಮತ್ತು  ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿಗಳನ್ನು ಕಲೆಹಾಕಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲಗೌಡರ ನೇತೃತ್ವದ ಸಮಿತಿಯೊಂದು ಇತ್ತೀಚೆಗೆ ನಗರಕ್ಕೆ ಆಗಮಿಸಿತ್ತು. ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಜನತಾ ನ್ಯಾಯಾಲಯ ಕಲಾಪ ನಡೆದಿದ್ದು, ಗೋಲಿಬಾರ್ ನಲ್ಲಿ ಮೃತಪಟ್ಟ ಜಲೀಲ್ ಅವರ ಇಬ್ಬರು ಮಕ್ಕಳು ಆಗಮಿಸಿದ್ದರು.

ಸಮಿತಿಯಲ್ಲಿ ಗೋಪಾಲಗೌಡರ ಜೊತೆ ಬಿಟಿ ವೆಂಕಟೇಶ್ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಇದ್ದರು. ಸಮಿತಿಯ ಮುಂದೆ ಹಾಜರಾದ ಇಬ್ಬರು ಮಕ್ಕಳು ತಮ್ಮನ್ನು ಶಿಫಾನಿ ಮತ್ತು ಸಬೀಲ್ ಎಂದು ಪರಿಚಯಿಸಿಕೊಂಡರು. ಶಿಫಾನಿಗೆ 14 ವರ್ಷ ವಯಸ್ಸಾಗಿದ್ದು, 9ನೆ ತರಗತಿ ವಿದ್ಯಾರ್ಥಿನಿ. ಸಬೀಲ್ 5ನೆ ತರಗತಿ ವಿದ್ಯಾರ್ಥಿಯಾಗಿದ್ದು, 9 ವರ್ಷ ವಯಸ್ಸಾಗಿದೆ. ಶಿಫಾನಿ ಮತ್ತು ಸಬೀಲ್ ಇಬ್ಬರೂ ಯಾವುದೇ ಸಹಾಯವನ್ನು ಯಾಚಿಸಿ ಸಮಿತಿಯ ಮುಂದೆ ಹಾಜರಾಗಿರಲಿಲ್ಲ. ಬದಲಾಗಿ ಇಬ್ಬರೂ ಡಿಸೆಂಬರ್ 19ರಂದು ಏನು ನಡೆದಿತ್ತು ಎನ್ನುವುದನ್ನು ವಿವರಿಸುವುದಕ್ಕಾಗಿ ಅಲ್ಲಿಗೆ ಬಂದಿದ್ದರು.

ಆರಂಭದಲ್ಲಿ ಜಸ್ಟಿಸ್ ಗೋಪಾಲಗೌಡರು ಇಬ್ಬರು ಮಕ್ಕಳೊಂದಿಗೆ ಅವರಿಗೆ ಶಿಕ್ಷಣದ ಬಗ್ಗೆ ವಿಚಾರಿಸಿದರು. ತಾನು ಪೈಲಟ್ ಆಗಲು ಬಯಸಿದ್ದೇನೆ ಎಂದ ಸಬೀಲ್, ಡಿಸೆಂಬರ್ 19ರಂದು ಪೊಲೀಸರು ಗುಂಡಿಕ್ಕುವ 2 ಗಂಟೆಗಳ ಮೊದಲು ತಂದೆ ತಾನು ಮತ್ತು ಸಹೋದರಿಯನ್ನು ಶಾಲಾ ವಾಹನದಿಂದ ಕರೆತಂದಿದ್ದರು ಎಂದು ವಿವರಿಸಿದ.

"ಡಿಸೆಂಬರ್ 19ರಂದು ಮಧ್ಯಾಹ್ನ 1:30ರ ವೇಳೆಗೆ ಅವರು ನಮ್ಮನ್ನು ಶಾಲೆಯ ವಾಹನದಿಂದ ಕರೆದೊಯ್ದರು. ಅದೇ ದಿನ ಮಧ್ಯಾಹ್ನದ ನಂತರ ನಾವೆಲ್ಲರೂ ಊಟ ಮಾಡಿದೆವು. ನಮಾಝ್ ಮಾಡಲು ಹೋಗುತ್ತಿದ್ದೇನೆ ಎಂದು ಹೇಳಿ ತಂದೆ ಮನೆಯಿಂದ ಹೊರಹೋದರು. ಆ ಸಂದರ್ಭ ಅಲ್ಲಿ ಹಿಂಸಾಚಾರ ನಡೆಯುತ್ತಿತ್ತು. ಆ ಸಂದರ್ಭ ಪೊಲೀಸರು ತಂದೆಯ ಕಣ್ಣು ಮತ್ತು ಮೆದುಳಿಗೆ ಗುಂಡಿಕ್ಕಿದರು" ಎಂದು ಸಬೀಲ್ ವಿವರಿಸಿದ.

ಜಲೀಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೇ ಎನ್ನುವ ಸಮಿತಿಯ ಪ್ರಶ್ನೆಗೆ ಉತ್ತರಿಸಿದ ಸಬೀಲ್, ಜಲೀಲ್ ಪ್ರತಿಭಟನೆಯ ಭಾಗವಾಗಿದ್ದರು ಎನ್ನುವ ಆರೋಪಗಳನ್ನು ನಿರಾಕರಿಸಿದ. ಅಂದು ಮಧ್ಯಾಹ್ನದ ನಂತರ ತಂದೆ ಮನೆಯಲ್ಲೇ ಇದ್ದರು. ನಂತರ ನಮಾಝ್ ಮಾಡಲೆಂದು ತೆರಳಿದರು ಎಂದು ಬಾಲಕ ಸಬೀಲ್ ವಿವರಿಸಿದ.

ಮನೆಯಿಂದ ತಂದೆ ಕಾಲು ಹೊರಗಿಟ್ಟ ಸ್ವಲ್ಪ ಸಮಯದಲ್ಲೇ ಅವರಿಗೆ ಗುಂಡಿಕ್ಕಲಾಯಿತು. ಈ ಸಂದರ್ಭ ಅವರು ನೆಲಕ್ಕುರುಳುವುದನ್ನು ತಾನು ನೋಡಿದ್ದೇನೆ ಎಂದು ಜಲೀಲ್ ರ ಪುತ್ರಿ ಶಿಫಾನಿ ವಿವರಿಸಿದರು.

"ಅವರು ನಮ್ಮ ಜೊತೆ ಊಟ ಮಾಡಿದರು. ನಂತರ ನಮಾಝ್ ಮಾಡಲು ಹೋಗುತ್ತಿದ್ದೇನೆಂದು ಹೇಳಿ ಮನೆಯಿಂದ ತೆರಳಿದರು. ಮನೆಯಿಂದ ಹೊರಗೆ ಹೋದ ತಕ್ಷಣ ಪೊಲೀಸರು ಗುಂಡಿಕ್ಕಿದರು. ಅವರು ನಡೆದು ಹೋದದ್ದನ್ನು ಮತ್ತು ನೆಲಕ್ಕೆ ಕುಸಿದು ಬಿದ್ದದ್ದನ್ನು ನಾವು ನೋಡಿದ್ದೇವೆ. ಅವರು ಸ್ಥಳದಲ್ಲೇ ಮೃತಪಟ್ಟರು. ಸ್ವಲ್ಪ ಸಮಯದ ಮುನ್ನ ಅವರು ನಮ್ಮ ಜೊತೆಗಿದ್ದರು. ನಮಾಝ್ ಮಾಡುವುದಕ್ಕಾಗಿ ಪೊಲೀಸರು ಎಲ್ಲಿದ್ದಾರೆ, ಮನೆಯ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವುದನ್ನು ನೋಡಲು ಅವರು ಹೋಗಿದ್ದರು. ಆದರೆ ಅವರಿಗೆ ಗುಂಡಿಕ್ಕಲಾಯಿತು" ಎಂದು ಹೇಳುತ್ತಾ ಗದ್ಗದಿತರಾದರು ಶಿಫಾನಿ.

ಈ ಸಂದರ್ಭ ಪ್ರತಿಕ್ರಿಯಿಸಿದ ಜಸ್ಟಿಸ್ ಗೌಡ ಅವರು ಜಲೀಲ್ ನಿಧನಕ್ಕೆ ಸಂತಾಪ ಸೂಚಿಸಿದರು. ಸತ್ಯ ಹೊರಬರಲಿದೆ ಮತ್ತು ಜಲೀಲ್ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಧೈರ್ಯ ತುಂಬಿದರು.

ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರನ್ನೂ ಪೊಲೀಸರು ಆರೋಪಿಗಳೆಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಿರುವುದು ಈಗಾಗಲೇ ವಿವಾದವನ್ನು ಸೃಷ್ಟಿಸಿದೆ. ಈ ನಡುವೆ ರಾಜ್ಯ ಸರಕಾರವು ಮೃತರ ಕುಟುಂಬಕ್ಕೆ ಘೋಷಿಸಿದ್ದ ಪರಿಹಾರವನ್ನು ಹಿಂಪಡೆದಿದೆ.

ತನಿಖೆ ನಡೆದು ಸತ್ಯಾಂಶ ಏನೆಂದು ಬಯಲಾದರೂ ತಮ್ಮ ತಂದೆ ರಕ್ತದ ಮಡುವಿನಲ್ಲಿ ಬಿದ್ದದ್ದನ್ನು ಕಂಡ ಮಕ್ಕಳಾದ ಶಿಫಾನಿ ಮತ್ತು ಸಬೀಲ್ ರ ಮಾನಸಿಕ ಜರ್ಜರಿತ ಸರಿಯಾಗದು. ಈ ಮಕ್ಕಳು ಹೇಳಿದ್ದು ಸತ್ಯವೆಂದು ಸಾಬೀತಾದರೂ ಶಿಫಾನಿ ಮತ್ತು ಸಬೀಲ್ ರ ಬಾಲ್ಯವನ್ನು ನುಚ್ಚುನೂರು ಮಾಡಿದ್ದಕ್ಕೆ ಹೊಣೆ ಯಾರು ಎನ್ನುವ ಪ್ರಶ್ನೆ ಹಾಗೆಯೇ ಉಳಿದುಬಿಡುತ್ತದೆ.

Writer - ಇಸ್ಮಾಯೀಲ್

contributor

Editor - ಇಸ್ಮಾಯೀಲ್

contributor

Similar News