ಕತಾರ್ನಿಂದ ಹೊರಟ ಯುವಕ ನಾಪತ್ತೆ
ಪಡುಬಿದ್ರಿ, ಜ.14: ಕತಾರ್ ದೇಶದಿಂದ ಭಾರತಕ್ಕೆ ಹೊರಟ ಉಚ್ಚಿಲ ಭಾಸ್ಕರ ನಗರದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಚ್ಚಿಲ ಭಾಸ್ಕರನಗರದ ನಾಯರ್ ಕಂಪೌಂಡ್ ನಿವಾಸಿ ಇಸ್ಮಾಯಿಲ್ ಎಂಬವರ ಮಗ ನೂಮಾನ್ ಎಂಬವರು ಒಂದುವರೆ ವರ್ಷಗಳಿಂದ ಕತಾರ್ ನಲ್ಲಿ ಅಕೌಂಟೆಂಟ್ ಕೆಲಸ ಮಾಡಿಕೊಂಡಿದ್ದು, ಜ.6ರಂದು ಕರೆ ಮಾಡಿದ ಆತ ಭಾರತಕ್ಕೆ ಬರುವುದಾಗಿ ಮನೆಯವರಿಗೆ ತಿಳಿಸಿದ್ದನು.
ಜ.7ರಂದು ನುಮಾನ್ನನ್ನು ಆತನ ಗೆಳೆಯ ತೌಸೀಫ್ ಎಂಬವರು ಕತಾರ್ನ ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದು, ನಂತರ ಮೂಳೂರಿನ ಆಸ್ಕರ್ ಎಂಬವರು ನುಮಾನ್ ಕತಾರ್ನಿಂದ ಮುಂಬೈಗೆ ಬಂದಿರುವುದಾಗಿ ತಿಳಿಸಿದ್ದನು. ಆದನೆ ನೂಮಾನ್ ಮನೆಗೆ ಬಾರದೆ ಜ.13ರಂದು ಇನ್ಸ್ಟಗ್ರಾಮ್ ನಲ್ಲಿ ತನ್ನ ಸಹೋದರ ನೌಫಲ್ ಎಂಬಾತನಿಗೆ ಮೇಸೇಜ್ ಮಾಡಿದ್ದು, ನಾನು ಈಗ ಕರೆ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದನು. ಅದರ ನಂತರ ನುಮಾನ್ ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.