ಎನ್ಆರ್ಸಿ ವಿರುದ್ಧ ಜನಜಾಗೃತಿಗೆ ಅನುಮತಿ ನಿರಾಕರಣೆ: ಹೈಕೋರ್ಟ್ ಮೆಟ್ಟಿಲೇರಲು ಪಿಯುಸಿಎಲ್ ಚಿಂತನೆ
ಮಂಗಳೂರು, ಜ.18: ‘ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನಜಾಗೃತಿ ಮೂಡಿಸಲು ಎಸ್ಕೆಎಸ್ಸೆಸ್ಸೆಫ್ ವಿನಂತಿ ಮೇರೆಗೆ ಅನುಮತಿಗಾಗಿ ಹಲವು ಬಾರಿ ಯತ್ನಿಸಿದ್ದೇವು. ಪೊಲೀಸರು ಅನುಮತಿ ನೀಡಿ ಕೊನೆಯ ಗಳಿಗೆಯಲ್ಲಿ ನಿರಾಕರಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಚಿಂತನೆ ನಡೆದಿದೆ’ ಎಂದು ಪಿಯುಸಿಎಲ್ನ ಜಿಲ್ಲಾ ಅಧ್ಯಕ್ಷ ಆರ್. ಈಶ್ವರ್ ರಾಜ್ ತಿಳಿಸಿದ್ದಾರೆ.
ನಗರದ ಡಾನ್ಬೋಸ್ಕೋ ಮಿನಿ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿಎಲ್-ಎಸ್ಕೆಎಸ್ಸೆಸ್ಸೆಫ್ ನೇತೃತ್ವದಲ್ಲಿ ನಗರದ ಬಲ್ಮಠದ ಯುನೈಟೆಡ್ ಬಾಸೆಲ್ ಮಿಶನ್ ಮೈದಾನದಲ್ಲಿ ಜ.18ರಂದು ನಡೆಯಬೇಕಿದ್ದ ಜನಜಾಗೃತಿ ಸಭೆಯು ರದ್ದುಗೊಂಡಿದೆ. ಪೊಲೀಸರು ಹಲವು ಕಾರಣ ನೀಡಿ ಅನುಮತಿ ನಿರಾಕರಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್ನ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ, ಜಿಲ್ಲಾ ಖಜಾಂಚಿ ಹನೀಫ್ ಪಾಜಪ್ಪಳ್ಳ, ಪ್ರಧಾನ ಕಾರ್ಯದರ್ಶಿ ಅಜಯ್ ಡಿಸಿಲ್ವ ಮತ್ತಿತರರು ಉಪಸ್ಥಿತರಿದ್ದರು.