ದಲಿತ ಯುವಕನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
Update: 2020-01-19 15:06 GMT
ಸಾಗರ್,ಜ.19: ಇಲ್ಲಿಯ ಅಂಬೇಡ್ಕರ್ ವಾರ್ಡ್ನಲ್ಲಿ ನಡೆದ ಘರ್ಷಣೆಯ ಬಳಿಕ ದಲಿತ ಯುವಕನೋರ್ವನಿಗೆ ನಾಲ್ವರು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಗಂಭೀರ ಸುಟ್ಟಗಾಯಗಳಾಗಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತನ್ನ ನೆರೆಕರೆಯ ನಾಲ್ವರು ವ್ಯಕ್ತಿಗಳು ತನ್ನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಗಿ ಯುವಕ ತಿಳಿಸಿದ್ದಾನೆ. ಆತನಿಗೆ ಶೇ.50ಕ್ಕೂ ಹೆಚ್ಚು ಸುಟ್ಟಗಾಯಗಳಾಗಿವೆ. ಐಪಿಸಿ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಸ್ಪಿ ಅಮಿತ್ ಸಾಂಘಿ ಅವರು ಸುದ್ದಿಗಾರರಿಗೆ ತಿಳಿಸಿದರು.
ತನ್ಮಧ್ಯೆ,ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ರಾಕೇಶ ಸಿಂಗ್ ಅವರು ಘಟನೆಯ ಕುರಿತು ಕಮಲನಾಥ ನೇತೃತ್ವದ ರಾಜ್ಯ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.