ಕೊನೆ ಆಸೆ ಬಗ್ಗೆ ಬಾಯಿ ಬಿಡದ ನಿರ್ಭಯಾ ಪ್ರಕರಣದ ಆರೋಪಿಗಳು
ಹೊಸದಿಲ್ಲಿ, ಜ. 23: ಕೊನೆಯ ಬಾರಿ ಕುಟುಂಬವನ್ನು ಭೇಟಿಯಾಗಿರುವ ಹಾಗೂ ತಮ್ಮ ಸೊತ್ತಿನ ಬಗ್ಗೆ ವಿಲ್ ಬರೆಯುವ ಕುರಿತ ಪ್ರಶ್ನೆಗೆ ಫೆಬ್ರವರಿ 1ರಂದು ಗಲ್ಲಿಗೇರಲಿರುವ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಕೊನೆಯ ಬಾರಿಗೆ ಕುಟುಂಬದ ಯಾವ ಸದಸ್ಯನನ್ನು ಹಾಗೂ ಎಲ್ಲಿ ಭೇಟಿಯಾಗಬೇಕು ಎಂದು ಹೇಳುವ ಅವಕಾಶ ಮರಣದಂಡನೆಗೆ ಗುರಿಯಾದ ಆರೋಪಿಗೆ ಕಾನೂನಿನಲ್ಲಿ ಇದೆ. ಸೊತ್ತನ್ನು ಯಾರದಾದರೂ ಹೆಸರಿಗೆ ವರ್ಗಾಯಿಸಲು ಬಯಸುವ ಬಗ್ಗೆ ಆರೋಪಿಗಳು ತಿಳಿಸುವ ಅವಕಾಶ ಇದೆ. ಈ ಎರಡೂ ಪ್ರಶ್ನೆಗಳಿಗೆ ಆರೋಪಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಸಿಂಗ್ ಹಾಗೂ ಪವನ್ ಗುಪ್ತಾ ಮೌನಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
2012ರಲ್ಲಿ ನಡೆದ 23 ವರ್ಷದ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಗಲ್ಲಿಗೇರಿಸಲು ವಿಳಂಬಿಸುತ್ತಿರುವ ಬಗ್ಗೆ ನಿರ್ಭಯ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.