ಕೊರೋನ ವೈರಸ್: ಕರಾವಳಿಯಲ್ಲಿ ಕಟ್ಟೆಚ್ಚರ

Update: 2020-01-25 13:04 GMT

ಮಂಗಳೂರು, ಜ.24: ಚೀನಾದಲ್ಲಿ ದಿಢೀರ್ ಕಾಣಿಸಿಕೊಂಡು ಮನುಷ್ಯ ಜೀವಕ್ಕೆ ಮಾರಕವಾಗಿ ಪರಿಣಮಿಸಿದ ‘ಕೊರೋನ ವೈರಸ್’ ಇದೀಗ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

‘ಕೊರೋನ ವೈರಸ್’ ಹೆಸರಿನ ಹೊಸ ಮಾದರಿಯ ಭಯಾನಕ ಕಾಯಿಲೆಗೆ ಜಗತ್ತಿನಾದ್ಯಂತ 25 ಮಂದಿ ಬಲಿಯಾಗಿದ್ದರೆ, 800ಕ್ಕೂ ಅಧಿಕ ಜನರಿಗೆ ಈ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ ವಿಶ್ವಾದ್ಯಂತ ಆರು ಸಾವು ಪ್ರಕರಣಗಳು ಹೆಚ್ಚಳವಾಗಿದ್ದು, ಎಲ್ಲೆಡೆ ಭೀತಿ ಮೂಡಿಸಿದೆ. ಥಾಯ್ಲೆಂಡ್, ಜಪಾನ್, ದಕ್ಷಿಣ ಕೊರಿಯಾ ರಾಷ್ಟ್ರಗಳಲ್ಲೂ ಸೋಂಕು ಪತ್ತೆಯಾಗಿದೆ.

ಸೌದಿ ಅರೇಬಿಯಾದಲ್ಲಿ ಭಾರತೀಯ ಕೇರಳ ಮೂಲದ ನರ್ಸ್‌ಗೆ ಈ ಸೋಂಕು ತಗುಲಿದೆ. ಈ ಮೂಲಕ ‘ಕೊರೋನವೈರಸ್’ ಸೋಂಕಿಗೆ ಗುರಿಯಾದ ಮೊದಲ ಭಾರತೀಯರಾಗಿದ್ದಾರೆ. ಸೌದಿಯಲ್ಲಿ 100 ಭಾರತೀಯ ನರ್ಸ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದ ಸಂದರ್ಭ ಓರ್ವ ನರ್ಸ್‌ಗೆ ಸೋಂಕು ಹರಡಿರುವುದು ಪತ್ತೆಯಾಗಿದೆ. ಹಾಗಾಗಿ, ಸೌದಿ ಅರೇಬಿಯಾ ಸಹಿತ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರನ್ನು ಮುನ್ನೆಚ್ಚರಿಕೆ ಕ್ರಮ ವಾಗಿ ತಪಾಸಣೆ ನಡೆಸಲಾಗುತ್ತಿದೆ.

‘ಗಲ್ಫ್ ರಾಷ್ಟ್ರಗಳಿಂದ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ತಪಾಸಣೆಗೆ ಆರೋಗ್ಯ ಕಾರ್ಯಕರ್ತರನ್ನು ರಾಜ್ಯ ಸರಕಾರ ನೇಮಿಸಲು ತೀರ್ಮಾನಿಸಿದೆ. ಕರಾವಳಿಯಲ್ಲೂ ‘ಕೊರೋನವೈರಸ್’ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ’ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

‘ಕರಾವಳಿ ಭಾಗಕ್ಕೆ ಇಲ್ಲಿಯವರೆಗೆ ಕೊರೋನವೈರಸ್‌ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯ ಆರೋಗ್ಯ ಇಲಾಖೆಯ ಸೂಚನೆಯಂತೆ ಜಿಲ್ಲೆಯ ಎಲ್ಲ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ಮಾರ್ಗದರ್ಶನ ನೀಡಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹಾಗೂ ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಾಗಿದೆ’ ಎನ್ನುತ್ತಾರೆ ಡಿಎಚ್‌ಒ ರಾವ್.

‘ಈ ಮೊದಲು ‘ಎಚ್1ಎನ್1’, ‘ನಿಫಾಹ್’ ವೈರಸ್ ಕಂಡುಬಂದಾಗಲೂ ಜಿಲ್ಲೆಯಲ್ಲಿ ವಿಶೇಷ ವಾರ್ಡ್‌ಗಳನ್ನು ತೆರೆಯಲಾಗಿತ್ತು. ಅದರಂತೆ, ಜಿಲ್ಲೆಯಲ್ಲಿ ಅಂತಹ ಪ್ರಕರಣ ಕಂಡುಬಂದಲ್ಲಿ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗುವುದು. ಅದಕ್ಕಾಗಿಯೇ ಪ್ರತ್ಯೇಕವಾಗಿ ಒಂದು ಬೆಡ್‌ನ ಸೌಕರ್ಯ ಕಲ್ಪಿಸಲಾಗಿದೆ’ ಎನ್ನುತ್ತಾರೆ ಆರೋಗ್ಯಾಧಿಕಾರಿ.

‘ವಿಶೇಷ ವಾರ್ಡ್‌ಗೆ ವೈದ್ಯರು, ನರ್ಸ್‌ಗಳನ್ನು ನಿಯೋಜನೆ ಮಾಡಲಾಗುವುದು. ಸೋಂಕು ತಗುಲಿದ ರೋಗಿ ಹಾಗೂ ಆತನ ಸಮೀಪವರ್ತಿಗಳಿಗೂ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆ ವೈದ್ಯರು, ನರ್ಸ್‌ಗಳು ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಬಟ್ಟೆಗಳನ್ನು ಧರಿಸಿಯೇ ಚಿಕಿತ್ಸೆ ನೀಡಲಿದ್ದಾರೆ’ ಎಂದು ಆರೋಗ್ಯಾಧಿಕಾರಿ ತಿಳಿಸಿದರು.

‘ಕೊರೋನ ವೈರಸ್’ ತುಂಬ ಅಪಾಯಕಾರಿ ವೈರಸ್. ಜಿಲ್ಲೆಯ ಜನತೆ ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಸ್ವಯಂ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಲಕ್ಷ ವಹಿಸಬೇಕು. ಯಾವುದೇ ವ್ಯಕ್ತಿಯನ್ನು ಸ್ಪರ್ಶಿಸಿದಾಗಲೂ ಕೈತೊಳೆದುಕೊಳ್ಳಬೇಕು. ಇದರಿಂದ ರೋಗಾಣುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಕ್ಕೆ ಕಡಿವಾಣ ಬೀಳಲಿದೆ’ ಎನ್ನುತ್ತಾರೆ ಡಿಎಚ್‌ಒ ಡಾ.ರಾಮಕೃಷ್ಣ ರಾವ್.

‘ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿವೈದ್ಯರು ಮುಂಜಾಗ್ರತೆ ವಹಿಸಲಿದ್ದಾರೆ. ವಿದೇಶದಿಂದ ಬರುವ ಪ್ರಯಾಣಿಕರಲ್ಲಿ ಅಂತಹ ಸೋಂಕು ಪತ್ತೆಯಾದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಿದ್ದಾರೆ. ಅಂಥವರಿಗೆ ಪ್ರತ್ಯೇಕವಾಗಿ, ವಿಶೇಷ ಚಿಕಿತ್ಸೆ ನೀಡಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದರು.

ಕೊರೋನ ವೈರಸ್ ಲಕ್ಷಣಗಳು

►ಶೀತ

► ಜ್ವರ

► ಕೆಮ್ಮು

► ತಲೆನೋವು

► ತಲೆಭಾರ

►ನ್ಯುಮೋನಿಯಾ

► ಉಸಿರಾಟ ಸಮಸ್ಯೆಗಳು

‘ಬ್ಯಾರಿಯರ್ ನರ್ಸಿಂಗ್’ ತಂತ್ರಜ್ಞಾನದ ವಿಧಾನ ಬಳಸಿಕೊಂಡು ಅಂತಹ ಸೋಂಕು ಹರಡಿದ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುವುದು. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ನ್ನು ತೆರೆಯಲಾಗಿದೆ. ಜನತೆ ಸ್ವಯಂ ಮುಂಜಾಗ್ರತೆ ವಹಿಸುವುದು ಒಳ್ಳೆಯದು.

- ಡಾ.ರಾಜೇಶ್ವರಿ ದೇವಿ,ವೆನ್ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕಿ

ದ.ಕ. ಜಿಲ್ಲೆಯ ಯಾವುದೇ ಭಾಗದಲ್ಲಿ ‘ಕೊರೋನ ವೈರಸ್’ ಸೋಂಕು ವರದಿಯಾಗಿಲ್ಲ. ಒಂದು ವೇಳೆ ಅಂತಹ ಪ್ರಕರಣ ಕಂಡುಬಂದಲ್ಲಿ ಗೌಪ್ಯತೆ ಕಾಪಾಡಿಕೊಳ್ಳದೇ ನೇರವಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಎಲ್ಲ ರೀತಿಯಿಂದಲೂ ಆರೋಗ್ಯ ಇಲಾಖೆ ಸನ್ನದ್ಧ ಇದೆ.

- ಡಾ.ರಾಮಕೃಷ್ಣ ರಾವ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ 

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News