ಆಳ್ವಾಸ್‍ನಲ್ಲಿ ಗಣರಾಜ್ಯೋತ್ಸವದ ಸಂಭ್ರಮ

Update: 2020-01-26 10:07 GMT

ಮೂಡುಬಿದಿರೆ : ದೇಶದಲ್ಲಿ ನೂರ ಮೂವತ್ತು ಕೋಟಿ ಜನಸಂಖ್ಯೆ ಇದ್ದರೂ ಅಬ್ದುಲ್ ಕಲಾಂ ಕಂಡ 2020ಯ ಕನಸನ್ನು ಪೂರ್ಣವಾಗಿ ಸಾಕಾರಗೊಳಿಸಲು ವಿಫಲರಾಗಿದ್ದೇವೆ. ಸಾಧಿಸಬೇಕಾದ ವಿಷಯಗಳು ಇನ್ನು ತುಂಬಾ ಇವೆ. ಭಾರತದಲ್ಲಿ ಪ್ರತಿದಿನವು ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ದೇಶದಲ್ಲಿ 40 ಕೋಟಿಯಷ್ಟು ಜನರು ತಿನ್ನಲು ಅನ್ನ ಸಿಗದೆ ನರಳುತ್ತಿದ್ದಾರೆ. ನಮ್ಮ ರಕ್ಷಣೆಯಿಂದ ಹಿಡಿದು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವವರೆಗೆ ಪ್ರತೀ ವ್ಯವಸ್ಥೆಯನ್ನು ದೇಶ ಮಾಡಿಕೊಟ್ಟಿದೆ ಹೀಗಿರುವಾಗ ದೇಶ ಚೆನ್ನಾಗಿರಲು ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು  ಚಿಂತಿಸುವ ಅನಿವಾರ್ಯತೆ ಇದೆ ಎಂದು ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಹೇಳಿದರು.

ಪುತ್ತಿಗೆಯ ವನಜಾಕ್ಷಿ ಕೆ ಶ್ರೀಪತಿ ಭಟ್ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ವತಿಯಿಂದ ನಡೆದ 71ನೇ ಗಣರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಅತಿಥಿಗಳನ್ನು ಕೆಡೆಟ್ ಕ್ಯಾಪ್ಟನ್ ಚಂದನ ಎಸ್, ಪಿಟಿ ಆಫೀಸರ್ ಗಳಾದ ಕೀರ್ತನ ಶೆಟ್ಟಿ, ಶರಣ್ಯ ಎಂ.ಎನ್, ಸೇಜಲ್ ಅವರು ವೇದಿಕೆಗೆ ಕರೆತಂದರು. ಪರೇಡ್ ಕಮಾಂಡರ್ ಸೀನಿಯರ್ ಅಂಡರ್ ಆಫೀಸರ್ ಮುತ್ತಮ್ಮ ವರದಿ ನೀಡಿದರು. ಗಾರ್ಡ್ ಕಮಾಂಡರ್ ಜ್ಯೂನಿಯರ್  ಅಂಡರ್ ಆಫೀಸರ್ ಮನೋಜ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ವಂದೇ ಮಾತರಂ ಗೀತೆಯ ಬಳಿಕ ಧ್ವಜಾರೋಹಣ ಮಾಡಲಾಯಿತು. ರಾಷ್ಟ್ರಗೀತೆ ಹಾಡುವುದರ ಮೂಲಕ ದೇಶಕ್ಕೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‍ಸಿಸಿ  ಗ್ರೂಪ್ ಕಮಾಂಡರ್ ಕರ್ನಲ್ ಶರ್ಮ ವಹಿಸಿದ್ದರು. ವಿಶೇಷ ಆಹ್ವಾನಿತರಾದ ಕರ್ನಲ್ ಮನೋಜ್ ವಿ ಯು,  ಗ್ರೂಪ್ ಕ್ಯಾಪ್ಟನ್ ಆರ್ ಶ್ರೀನಿವಾಸನ್, ಕಮಾಂಡರ್ ವಿಫುಲ್ ಗುಪ್ತ, ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ಡಾ. ವಿನಯ್ ಆಳ್ವ ಉಪಸ್ಥಿತರಿದ್ದರು.

ಆಕರ್ಷಕ ಪಥಸಂಚಲನ

20 ನಿಮಿಷಗಳ ಕಾಲ ನಡೆದ ಆಕರ್ಷಕ ಪಥ ಸಂಚಲನದಲ್ಲಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗಿನ ವಿವಿಧ ಕಾಲೇಜುಗಳ ಭೂಸೇನೆ, ನೌಕಾದಳ ಮತ್ತು ವಾಯುದಳದ 2400 ಎನ್‍ಸಿಸಿ ಕೆಡೆಟ್‍ಗಳು, ಎನ್‍ಸಿಸಿ ಬೆಟಾಲಿಯನ್‍ಗಳ ಕ್ಯಾಪ್ಟನ್‍ಗಳು, ಜತೆಗೆ 400 ರೋವರ್- ರೇಂಜರ್ ಹಾಗೂ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳು, 1300 ಎನ್ ಎಸ್ ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಭ್ರಮಕ್ಕೆ ಸಾಕ್ಷಿಯಾದ ನಾಗರಿಕರು

ಆಳ್ವಾಸ್‍ನಲ್ಲಿ ನಡೆದ ಗಣರಾಜ್ಯೋತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿ 25000 ಜನ; ಗಣ್ಯರು, ವಿಶೇಷ ಆಹ್ವಾನಿತರು, ಸಂಸ್ಥೆಯ ಪಾಲಕರು ಹಾಗೂ ಮೂಡುಬಿದಿರೆಯ ಸಾರ್ವಜನಿಕರು ಸೇರಿ 5000 ಹೀಗೆ ಒಟ್ಟು 30000 ಜನ ಆಳ್ವಾಸ್ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.

ತ್ರಿವರ್ಣದ ಮೆರುಗು

‘ಕೋಟಿಕಂಠೊ ಸೆ’ ಏಕತಾ ಹಾಡಿಗೆ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿ ಸಮೂಹ ದನಿಗೂಡಿಸಿ, ತ್ರಿವರ್ಣಧ್ವಜವನ್ನು ಹಾಡಿನ ತಾಳಕ್ಕೆ ಲಯಬದ್ಧವಾಗಿ ಬೀಸಿ ಸಂಭ್ರಮಿಸಿದರು. ನೆರೆದವರೆಲ್ಲರ ಕೈಯಲ್ಲಿದ್ದ ರಾಷ್ಟ್ರಧ್ವಜ, ತ್ರಿವರ್ಣ ಬಣ್ಣದ ಟೀ- ಶರ್ಟ್ ಧರಿಸಿದ್ದ ವಿದ್ಯಾರ್ಥಿಗಳು ಸಭೆಯ ಮಧ್ಯದಲ್ಲಿ ಮೂಡಿಸಿದ್ದ ‘ಇಂಡಿಯಾ’, ತ್ರಿವರ್ಣದ ಕೊಡೆಗಳು, ಬಾನಂಗಳದಿ ಹಾರಿಬಿಟ್ಟ ತ್ರಿವರ್ಣದ ಬೆಲೂನ್‍ಗಳು.......ಹೀಗೆ ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ತ್ರಿವರ್ಣ ಸಂಭ್ರಮ ಮನೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News