ಕೇಂದ್ರ ಸಚಿವ ಠಾಕೂರ್ ಸಭೆಯಲ್ಲಿ ‘ಗೋಲಿ ಮಾರೋ’ಘೋಷಣೆಗಳು

Update: 2020-01-27 17:55 GMT
ಫೈಲ್ ಚಿತ್ರ

ಹೊಸದಿಲ್ಲಿ,ಜ.27: ಸೋಮವಾರ ವಾಯುವ್ಯ ದಿಲ್ಲಿಯ ಬಿಜೆಪಿ ಅಭ್ಯರ್ಥಿ ಮನೀಷ ಚೌಧರಿ ಅವರ ಚುನಾವಣಾ ಪ್ರಚಾರಾರ್ಥ ನಡೆದ ಕೇಂದ್ರ ಸಚಿವ ಅನುರಾಗ ಠಾಕೂರ್ ಅವರ ರ್ಯಾಲಿಯಲ್ಲಿ ‘ಗೋಲಿ ಮಾರೋ’ ಘೋಷಣೆಗಳು ಕೇಳಿ ಬಂದಿವೆ. ಸ್ವತಃ ಠಾಕೂರ್ ಅವರೇ ಘೋಷಣೆಯ ಪೂರ್ವಾರ್ಧವನ್ನು ಕೂಗುತ್ತಿದ್ದು ಜನರು ಅದನ್ನು ಪೂರ್ಣಗೊಳಿಸುತ್ತಿದ್ದನ್ನು ವೀಡಿಯೊ ತುಣುಕು ತೋರಿಸಿದೆ. ಠಾಕೂರ್ ‘ದೇಶ ಕೆ ಗದ್ದಾರೋಂ ಕೋ ’ಎಂದು ಕೂಗಿದಾಗೆಲ್ಲ ಜನರು ‘ಗೋಲಿ ಮಾರೋ ಸಾಲೋಂ ಕೋ ’ಎಂದು ಅತ್ಯುತ್ಸಾಹದಿಂದ ಕೂಗುವ ಮೂಲಕ ಘೋಷಣೆಯನ್ನು ಪೂರ್ಣಗೊಳಿಸುತ್ತಿದ್ದ ವೀಡಿಯೊ ವೈರಲ್ ಆಗಿದೆ. ‘ದೇಶದ್ರೋಹಿಗಳಿಗೆ ಗುಂಡಿಕ್ಕಿ’ ಎನ್ನುವುದು ಇಡೀ ಘೋಷಣೆಯ ತಾತ್ಪರ್ಯ.

ಘೋಷಣೆಯ ಉತ್ತರಾರ್ಧ ‘ಗೋಲಿ ಮಾರೋ....’ಅನ್ನು ಕೂಗಿದ್ದು ಜನರು ಎಂದು ಬಿಜೆಪಿ ಮೂಲಗಳು ಸಮಜಾಯಿಷಿ ನೀಡಿವೆಯಾದರೂ ಅದು ಠಾಕೂರ್ ಕೂಗಿಗೆ ನೇರ ಸ್ಪಂದನವಾಗಿತ್ತು ಎನ್ನುವುದನ್ನು ವೀಡಿಯೊ ತೋರಿಸುತ್ತಿದೆ.

ಮಧ್ಯೆ ಮಧ್ಯೆ ಠಾಕೂರ್ ಜೋರಾಗಿ ಘೋಷಣೆಯನ್ನು ಕೂಗುವಂತೆ ಜನರನ್ನು ಹುರಿದುಂಬಿಸುತ್ತಿದ್ದ ದೃಶ್ಯವೂ ವೀಡಿಯೊದಲ್ಲಿ ದಾಖಲಾಗಿದೆ.

ಕಾರ್ಯಕ್ರಮದ ವೀಡಿಯೊ ತಮಗೆ ತಲುಪಿದ್ದು,ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಅಭ್ಯರ್ಥಿ ವೇದಿಕೆಯಲ್ಲಿ ಉಪಸ್ಥಿತರಿದ್ದುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದೂ ಅವರು ಹೇಳಿದರು.

ಆದರೆ ಠಾಕೂರ್ ವಿರುದ್ಧ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News