ಅಶೋಕನಗರ: ಭೂ ಕುಸಿತ; ಮೂವರು ಕಾರ್ಮಿಕರಿಗೆ ಗಾಯ

Update: 2020-01-29 17:10 GMT

ಮಂಗಳೂರು,ಜ.29: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕನಗರದಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಸಮುಚ್ಚಯ ಕಟ್ಟಡವೊಂದರ ಬಳಿ ಬುಧವಾರ ಭೂ ಕುಸಿತ ಸಂಭವಿಸಿದ್ದು, ಇದರ ಪರಿಣಾಮ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತಕ್ಷಣ ಕಾರ್ಮಿಕರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೂರು ತಿಂಗಳ ಹಿಂದೆ ಇದೇ ವಸತಿ ಸಮುಚ್ಚಯದ ಆವರಣ ತಡೆಗೋಡೆ ಕುಸಿದು ಕೆಲವು ಮಂದಿ ಗಾಯಗೊಂಡಿದ್ದರು. ಇದೀಗ ಆವರಣ ಗೊಡೆಯ ನಿರ್ಮಾಣ ಕಾಮಗಾರಿ ಮತ್ತೆ ನಡೆಯುತ್ತಿದೆ. ಬುಧವಾರ ಸಂಜೆ ಕಟ್ಟಡದ ಸಮೀಪದ ಗುಡ್ಡ ಕುಸಿದಿದೆ. ಈ ಸಂದರ್ಭ ಅಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದಿಂದ ಕಾರ್ಮಿಕರನ್ನು ಮಣ್ಣಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ.

ಮಾಹಿತಿ ಪಡೆದ ಉರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News