ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ನೀಡುವುದು ಮುಖ್ಯ ಗುರಿ: ಡಾ. ಸತೀಶ್ಚಂದ್ರ

Update: 2020-01-29 17:40 GMT

ಮಂಗಳೂರು,ಜ.29: ಸಾರ್ವತ್ರಿಕ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯದೆ ವಂಚಿತರಾಗಿರುವ ಮಕ್ಕಳಿಗೆ ಲಸಿಕೆ ನೀಡುವುದು ಮುಖ್ಯ ಗುರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾಧಿಕಾರಿ ಡಾ. ಸತೀಶ್ಚಂದ್ರ ಹೇಳಿದರು.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಮೂರನೇ ಸುತ್ತಿನ ಡಿ.ಟಿ.ಎಫ್.ಐ. ಸಮಿತಿಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಿಷನ್ ಇಂದ್ರ ಧನುಷ್ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಾಗಿದೆ. ಒಂದು ವರ್ಷದ ಮಗುವಿಗೆ ಹತ್ತು ಮಾರಕ ರೋಗಗಳ ವಿರುದ್ದ ಲಸಿಕೆಯನ್ನು ನೀಡಲಾಗುತ್ತದೆ. ಈ ಲಸಿಕಾ ಕಾರ್ಯಕ್ರಮವು ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದು, ಈಗಾಗಲೇ ಭಾರತದಲ್ಲಿ ಈ ಕಾರ್ಯಕ್ರಮ ಶೇ.92ರಷ್ಟು ಯಶಸ್ವಿಯಾಗಿದೆ. ಇನ್ನು ಶೇ.18 ಸಾಧಿಸಬೇಕಾಗಿದೆ ಹಾಗಾಗಿ ಇದಕ್ಕೆ ಆಶಾ ಕಾರ್ಯಕರ್ತೆ ಹಾಗೂ ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ (ಐ.ಸಿ.ಟಿ.) ಸೇರಿದಂತೆ ಇನ್ನಿತರ ಇಲಾಖೆಗಳು ಜನರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಡಾ. ಸತೀಶ್ಚಂದ್ರ ತಿಳಿಸಿದರು.

ಈಗಾಗಲೇ ಮೊದಲ ಸುತ್ತಿನ ಹಾಗೂ ಎರಡನೇ ಸುತ್ತಿನಲ್ಲಿ ಶೇ.97ರಷ್ಟು ಮಕ್ಕಳಿಗೆ, ಶೇ.98ರಷ್ಟು ಗರ್ಭಿಣಿಯರಿಗೆ ಈ ಯೋಜನೆಯ ಅನ್ವಯ ಲಸಿಕೆ ನೀಡುವ ಮೂಲಕ ಪ್ರಗತಿ ಸಾಧಿಸಿದೆ. ಮೂರನೇ ಸುತ್ತಿನ ಈ ಕಾರ್ಯಕ್ರಮವು ಫೆ.3ರಿಂದ ನಡೆಯಲಿದ್ದು, ಸಾರ್ವತ್ರಿಕ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಬಹುದಾಗಿದೆ. ಈ ಬಾರಿ ಲಸಿಕೆ ವಂಚಿತರಾಗಿರುವ ಮಕ್ಕಳಿಗೆ ಲಸಿಕೆ ನೀಡುವುದು ಮುಖ್ಯ ಗುರಿಯಾಗಿಸಿಕೊಂಡು ವಲಸಿಗರ ಪ್ರದೇಶ, ಸ್ಲಂ, ಕಟ್ಟಡ ಕಾರ್ಮಿಕರ ಸ್ಥಳ, ಮಾರುಕಟ್ಟೆ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಕಾರ್ಯಕರ್ತರು ತೆರಳಿ ಮಕ್ಕಳಿಗೆ ಲಸಿಕೆ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ರಾಮಕೃಷ್ಣ ರಾವ್, ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News