ಗೋಮೂತ್ರ, ಸಗಣಿ ಸೇವನೆ ಕೊರೋನಾವೈರಸ್ ಸೋಂಕಿಗೆ ಚಿಕಿತ್ಸೆ ಎಂದ ಹಿಂದೂ ಮಹಾಸಭಾ ಅಧ್ಯಕ್ಷ!
Update: 2020-02-01 16:01 GMT
ಹೊಸದಿಲ್ಲಿ: ಕೊರೋನಾವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಗೋಮೂತ್ರ ಹಾಗೂ ಸಗಣಿ ಬಳಸಬಹುದು ಎಂದು ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಶುಕ್ರವಾರ ಹೇಳಿದ್ದಾರೆ.
ವಿಶೇಷ ಯಜ್ಞ ಮಾಡುವ ಮೂಲಕ ಕೊರೋನಾ ವೈರಸ್ ಅನ್ನು ಕೊಲ್ಲಬಹುದು ಹಾಗೂ ಜಗತ್ತಿನ ಮೇಲೆ ಅದರ ದುಷ್ಪರಿಣಾಮ ತಡೆಗಟ್ಟಬಹುದು ಎಂದು ಅವರು ಹೇಳಿದರು.
‘‘ಗೋಮೂತ್ರ ಹಾಗೂ ಸೆಗಣಿ ಸೇವಿಸುವ ಮೂಲಕ ಕೊರೋನಾ ವೈರಸ್ ಸೋಂಕಿನ ದುಷ್ಪರಿಣಾಮ ತಡೆಯಬಹುದು. ಓಂ ನಮಃ ಶಿವಾಯ ಪಠಿಸುವ ಹಾಗೂ ದೇಹಕ್ಕೆ ಸೆಗಣಿ ಹಚ್ಚುವ ಮೂಲಕ ಕೊರೋನಾ ವೈರಸ್ ನಿಂದ ರಕ್ಷಿಸಿಕೊಳ್ಳಬಹುದು. ಕೊರೋನಾ ವೈರಸ್ ಅನ್ನು ಕೊಲ್ಲಲು ಶೀಘ್ರ ವಿಶೇಷ ಯಜ್ಞ ಆಚರಿಸಬೇಕಿದೆ’’ ಎಂದು ಚಕ್ರಪಾಣಿ ಹೇಳಿದರು.
ಚೀನಾದಲ್ಲಿ ಕೊರೋನಾ ವೈರಸ್ ಸೋಂಕಿನಿಂದ 213 ಸಾವು ಸಂಭವಿಸಿದ ಹಾಗೂ ದೇಶದ 31 ಪ್ರಾಂತ್ಯ ಮಟ್ಟದ ವಲಯಗಳಲ್ಲಿ 9,692 ಪ್ರಕರಣಗಳು ದೃಢಪಟ್ಟ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.