ಮೂಡಿಗೆರೆ: ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಯನ್ನು ಆಟೊದಿಂದ ತಳ್ಳಿ ಕೊಲೆ; ದೂರು

Update: 2020-02-05 14:01 GMT

ಚಿಕ್ಕಮಗಳೂರು, ಫೆ.5: ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಆಟೊ ಚಾಲಕ ಹಾಗೂ ಬಿಜೆಪಿ ಕಾರ್ಯಕರ್ತ ಎನ್ನಲಾದ ಯುವಕನೊಬ್ಬ ಕಾಲೇಜು ಯುವತಿಯನ್ನು ಆಟೊದಿಂದ ಕೆಳಗೆ ತಳ್ಳಿದ್ದರಿಂದ ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ಘಟನೆ ಮೂಡಿಗೆರೆ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ವರದಿಯಾಗಿದ್ದು, ಆಟೊ ಚಾಲಕನೇ ಯುವತಿಯನ್ನು ಕೊಲೆ ಮಾಡಿದ್ದಾನೆಂದು ಯುವತಿ ಪೋಷಕರು ದೂರು ನೀಡಿರುವ ಮೇರೆಗೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಬಾನಳ್ಳಿ ಗ್ರಾಮದ ರಮೇಶ್ ಹಾಗೂ ಶೈಲಾ ದಂಪತಿ ಪುತ್ರಿ ರಶ್ಮಿ(19) ಮೃತ ಕಾಲೇಜು ಯುವತಿಯಾಗಿದ್ದು, ತಾಲೂಕಿನ ಬಾನಳ್ಳಿ ಗ್ರಾಮದ ಆಟೊ ಚಾಲಕ ಚೇತನ್ ಯುವತಿಯ ಸಾವಿಗೆ ಕಾರಣ ಎಂದು ಮೃತ ಯುವತಿ ಪೋಷಕರು ಆರೋಪಿಸಿದ್ದಾರೆ. 

ಮೃತ ಯುವತಿ ರಶ್ಮಿ ಮೂಡಿಗೆರೆ ಪಟ್ಟಣದ ಡಿಎಸ್‍ಬಿಜಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿದ್ದಳೆಂದು ತಿಳಿದು ಬಂದಿದ್ದು, ಮಂಗಳವಾರ ಸಂಜೆ ಯುವತಿ ರಶ್ಮಿ ಕಾಲೇಜು ಮುಗಿಸಿಕೊಂಡು ಪಟ್ಟಣದ ಬಸ್ ನಿಲ್ದಾಣಕ್ಕೆ ಬಂದಿದ್ದು, ಅಲ್ಲಿಂದ ಬಾನಳ್ಳಿ ಗ್ರಾಮದ ಚೇತನ್ ಎಂಬಾತನ ಆಟೊದಲ್ಲಿ ತನ್ನ ಬಾನಳ್ಳಿಗೆ ಹೊರಟಿದ್ದಳೆಂದು ತಿಳಿದು ಬಂದಿದ್ದು, ಮಾರ್ಗ ಮಧ್ಯೆ ಆಟೊ ಚಾಲಕ ಚೇತನ್ ಯುವತಿ ರಶ್ಮಿ ಬಳಿ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದು, ಇದಕ್ಕೆ ಯುವತಿ ಚೇತನ್‍ನ ಪ್ರೀತಿಯನ್ನು ನಿರಾಕರಿಸಿದ್ದಾಳೆನ್ನಲಾಗಿದೆ.

ತನ್ನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಆಟೊ ಚಾಲಕ ಕುಪಿತನಾಗಿ ಆಟೊದಿಂದ ಯುವತಿಯನ್ನು ಕೆಳಗೆ ತಳ್ಳಿದ್ದಾನೆ. ಆಟೊದಿಂದ ಕೆಳಗೆ ಬಿದ್ದ ಯುವತಿ ತೀವ್ರವಾಗಿ ಗಾಯಗೊಂಡಿದ್ದಾಳೆ. ಆಕೆಯ ಬಾಯಿ ಮತ್ತು ಮೂಗಿನಲ್ಲಿ ರಕ್ತ ಸುರಿದಿದ್ದು, ಇದನ್ನು ಕಂಡ ಚೇತನ್ ಕೂಡಲೇ ಆಕೆಯನ್ನು ತನ್ನ ಆಟೊದಲ್ಲೇ ಆಸ್ಪತ್ರೆಗೆ ಕರೆ ತರಲು ಮುಂದಾಗಿದ್ದಾನೆ. ಈ ವೇಳೆ ರಶ್ಮಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.

ಘಟನೆಯ ಬಳಿಕ ಯುವತಿ ಪೋಷಕರು ತಮ್ಮ ಮಗಳು ರಶ್ಮಿಯನ್ನು ಆಟೊ ಚಾಲಕ ಚೇತನ್ ಆಟೊದಿಂದ ತಳ್ಳಿ ಕೊಲೆ ಮಾಡಿದ್ದಾನೆಂದು ಆರೋಪಿಸಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ಆಟೊ ಚಾಲಕ ಚೇತನ್‍ನನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಕೊಲೆ ಆರೋಪ ಎದುರಿಸುತ್ತಿರುವ ಚೇತನ್ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯನಾಗಿದ್ದ ಎಂದು ಹೇಳಲಾಗುತ್ತಿದ್ದು, ಕೆಲ ತಿಂಗಳಿನಿಂದ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಆತ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಮಂಗಳವಾರ ರಶ್ಮಿಯನ್ನು ಪ್ರೀತಿಸುತ್ತಿರುವ ವಿಷಯವನ್ನು ಆಕೆಯ ಬಳಿ ಹೇಳಿಕೊಂಡಾಗ ಅದನ್ನು ರಶ್ಮಿ ತಿರಸ್ಕರಿಸಿದಾಗ ಕೊಲೆ ಮಾಡಿರಬಹುದೆಂದು ಬಾನಳ್ಳಿ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News