ಒಮರ್ ಅಬ್ದುಲ್ಲಾ,ಮೆಹಬೂಬ ಮುಫ್ತಿ ಬಿಡುಗಡೆಗೆ ಪ್ರಿಯಾಂಕಾ ಗಾಂಧಿ ಆಗ್ರಹ
Update: 2020-02-07 13:43 GMT
ಹೊಸದಿಲ್ಲಿ,ಫೆ.7: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರ ವಿರುದ್ಧ ಯಾವ ಆಧಾರದಲ್ಲಿ ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್ಎ)ಯನ್ನು ಹೇರಲಾಗಿದೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಈ ಇಬ್ಬರು ನಾಯಕರನ್ನು ಬಿಡುಗಡೆಗೊಳಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.
ಈ ಇಬ್ಬರು ನಾಯಕರು ಸಂವಿಧಾನವನ್ನು ಎತ್ತಿ ಹಿಡಿದಿದ್ದಾರೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಬದ್ಧರಾಗಿದ್ದಾರೆ. ಅವರೆಂದೂ ಹಿಂಸಾಚಾರಕ್ಕೆ ಮತ್ತು ವಿಭಜಿಸುವ ಕೃತ್ಯಕ್ಕೆ ಕೈಹಾಕಿಲ್ಲ ಎಂದು ಟ್ವೀಟಿಸಿರುವ ಪ್ರಿಯಾಂಕಾ,ಯಾವುದೇ ಆಧಾರವಿಲ್ಲದೆ ಅವರನ್ನು ಅನಿರ್ದಿಷ್ಟಾವಧಿಗೆ ಬಂಧನದಲ್ಲಿಡುವಂತಿಲ್ಲ, ಅವರು ಬಿಡುಗಡೆಗೆ ಅರ್ಹರಾಗಿದ್ದಾರೆ ಎಂದಿದ್ದಾರೆ.