ಬ್ರಹ್ಮಾವರ: 2500ರೂ. ಬಾಕಿ ಹಣಕ್ಕಾಗಿ ಸ್ನೇಹಿತನನ್ನೇ ಬಾವಿಗೆ ದೂಡಿ ಕೊಲೆ !

Update: 2020-02-14 14:27 GMT

ಬ್ರಹ್ಮಾವರ, ಫೆ.14: ಬಾಕಿ ಹಣ ಪಾವತಿಸದೆ ಸತಾಯಿಸುತ್ತಿದ್ದ ದ್ವೇಷದಿಂದ ಸ್ನೇಹಿತನನ್ನೇ ಬಾವಿಗೆ ದೂಡಿ ಹಾಕಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಹೆಗ್ಗುಂಜೆ ಗ್ರಾಮದ ಪಡುಕೋಮೆ ನಿರ್ಜೆಡ್ಡು ಎಂಬಲ್ಲಿ ನಡೆದಿದೆ.

ಮೃತರನ್ನು ನಿರ್ಜೆಡ್ಡುವಿನ ಬಸವ ನಾಯ್ಕ ಹಾಗೂ ರಾಧಾ ಬಾಯಿ ದಂಪತಿ ಪುತ್ರ ಮನೋಜ್ (21) ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ರುವ ಆರೋಪಿ ನಿರ್ಜೆಡ್ಡುವಿನ ಸುನಿಲ್ ಶೆಟ್ಟಿ (21) ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ರಾಧಾ ಬಾಯಿ ಅವರ ಮನೆಗೆ ಬಂದ ಸುನೀಲ್ ಶೆಟ್ಟಿ, ಮನೋಜ್ ಬಗ್ಗೆ ಕೇಳಿ, ಆತನ ನನಗೆ 2,500ರೂ. ಹಣ ಕೊಡಲು ಇದೆ. ಹಣ ಪಡೆದು ಎರಡು ವರ್ಷಗಳಾದರೂ ಇನ್ನೂ ನೀಡಿಲ್ಲ. ಫೋನ್ ಮಾಡಿದರೆ ತೆಗೆಯುದಿಲ್ಲ. ಉಡುಪಿಯಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಎಂದು ಬೊಬ್ಬೆ ಹಾಕಿದ ಎಂದು ದೂರಲಾಗಿದೆ.

ಈ ವೇಳೆ ಮನೆಯೊಳಗೆ ಮಲಗಿದ್ದ ಮನೋಜ್ ಹೊರಗಡೆ ಬಂದು, ಮಂದಾರ್ತಿ ಬ್ಯಾಂಕ್‌ನಲ್ಲಿ ಹಣ ತೆಗೆದು ಕೊಡುತ್ತೇನೆ ಎಂದು ಹೇಳಿದ್ದು, ಆದರೆ ಸುನೀಲ್ ಶೆಟ್ಟಿ, ನನಗೆ ಈಗಲೇ ಹಣ ಬೇಕೆಂದು ಬೊಬ್ಬೆ ಹಾಕಿದನು. ಆಗ ಮನೋಜ್ ಹಲ್ಲುಜ್ಜಲು ಬಾವಿಯ ಕಡೆ ಹೋದಾಗ ಸುನೀಲ್ ಶೆಟ್ಟಿ ಕೂಡ ಆತನೊಂದಿಗೆ ಹೋದನು. ಅಲ್ಲಿಂದ ವಾಪಾಸ್ಸು ಬಂದ ಸುನೀಲ್ ಶೆಟ್ಟಿ, ರಾಧಾಭಾಯಿ ಅವರಲ್ಲಿ ಮನೋಜ್ ಬಾವಿಗೆ ಬಿದ್ದ ಎಂದು ಹೇಳಿ ಓಡಿ ಹೋದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಾಕಿ ಇರುವ 2,500ರೂ. ಹಣ ನೀಡದೆ ಸತಾಯಿಸುತ್ತಿರುವ ದ್ವೇಷದಿಂದ ಸುನೀಲ್ ಶೆಟ್ಟಿ, ನನ್ನ ಮಗನನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿರುವುದಾಗಿ ರಾಧಾಬಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮನೋಜ್ ಕೆಲವು ಸಮಯಗಳಿಂದ ಉಡುಪಿ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News