ಕೇರಳ ಸಂಸದನಿಂದ ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ನಿಲುವಳಿ ನೋಟಿಸ್

Update: 2020-02-17 07:02 GMT

ಹೊಸದಿಲ್ಲಿ ಫೆ.17: ರಾಷ್ಟ್ರಪತಿಯವರ ಭಾಷಣದ ಬಳಿಕ ವಂದನಾರ್ಪಣೆಕ್ಕೆ ಉತ್ತರಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯನ್ನು ‘ತಪ್ಪು ದಾರಿಗೆಳೆದಿದ್ದಾರೆಂದು’ ಹೇಳಿಕೊಂಡು ಸಿಪಿಐ ನಾಯಕ ಹಾಗೂ ರಾಜ್ಯಸಭಾ ಸಂಸದ ಬಿನೊಯ್ ವಿಶ್ವಂ ಅವರು ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ನಿಲುವಳಿ ನೋಟಿಸ್ ಸಲ್ಲಿಸಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ತಮ್ಮ ರಾಜ್ಯದ ವಿಧಾನಸಭೆಯಲ್ಲಿ ಮಾಡಿದ ಭಾಷಣವನ್ನು ಮೋದಿ ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ‘ತಪ್ಪಾಗಿ ಉಲ್ಲೇಖಿಸಿದ್ದಾರೆ’’ ಎಂದು ವಿಶ್ವಂ ಆರೋಪಿಸಿದ್ದಾರೆ.

ಮೋದಿ ಅವರು ಪಿಣರಾಯಿ ಹೇಳಿಕೆಯನ್ನು ತಮ್ಮದೇ ರಾಜಕೀಯ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ತಿರುಚಲು ಯತ್ನಿಸಿದ್ದಾರೆಂದು ರಾಜ್ಯಸಭಾ ಸೆಕ್ರಟೇರಿಯಟ್‌ಗೆ ಸಲ್ಲಿಸಿರುವ ತಮ್ಮ ನೋಟಿಸಿನಲ್ಲಿ ವಿಶ್ವಂ ಆರೋಪಿಸಿದ್ದಾರೆ. ಪಿಣರಾಯಿ ತಮ್ಮ ರಾಜ್ಯದ ವಿಧಾನಸಭೆಯಲ್ಲಿ ಮಾಡಿರುವ ಭಾಷಣವನ್ನು ಉಲ್ಲೇಖಿಸಿಕೊಂಡು ‘‘ಕೇರಳದಲ್ಲಿ ಪ್ರತಿಭಟನೆಗಳಲ್ಲಿ ತೀವ್ರಗಾಮಿ ಗುಂಪುಗಳು ಶಾಮೀಲಾಗಿವೆ’’ ಎಂದು ಮೋದಿ ತಮ್ಮ ಉತ್ತರದಲ್ಲಿ ಹೇಳಿರುವ ಕುರಿತಂತೆ ವಿಶ್ವಂ ತಮ್ಮ ಹಕ್ಕುಚ್ಯುತಿ ನಿಲುವಳಿ ನೋಟಿಸಿನಲ್ಲಿ ನಮೂದಿಸಿದ್ದಾರೆ.

‘‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧದ ಜನರ ಜನರ ಪ್ರತಿಭಟನೆಗಳು ಅಕ್ರಮ ಎಂದು ಹೇಳುವ ಯತ್ನವನ್ನು ಮೋದಿ ಮಾಡಿದ್ದಾರೆ’’ ಎಂದು ವಿಶ್ವಂ ಆರೋಪಿಸಿದ್ದಾರೆ.

ಪಿಣರಾಯಿ ಅವರು ತಮ್ಮ ಭಾಷಣದಲ್ಲಿ ತೀವ್ರಗಾಮಿ ಸಂಘಟನೆ ಎಸ್‌ಡಿಪಿಐಯನ್ನು ಉಲ್ಲೇಖಿಸಿದ್ದರು ಹಾಗೂ ಜನರ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಸೇರಿಕೊಂಡು ಅದನ್ನು ತಪ್ಪು ದಾರಿಗೆಳೆಯಲು ಯತ್ನಿಸುತ್ತಿರುವ ಕುರಿತಂತೆ ಉಲ್ಲೇಖಿಸಿದ್ದರು ಎಂದು ವಿಶ್ವಂ ತಮ್ಮ ನೋಟಿಸಿನಲ್ಲಿ ಹೇಳಿದ್ದರಲ್ಲದೆ, ಪ್ರಧಾನಿ ಹೇಳಿದಂತೆ ಯಾವುದೇ ಸನ್ನಿವೇಶದಲ್ಲೂ ಪಿಣರಾಯಿ ಸಿಎಎ ವಿರುದ್ಧದ ಜನರ ಪ್ರತಿಭಟನೆಯನ್ನು ಪ್ರಶ್ನಿಸಿಲ್ಲ ಅಥವಾ ತೀವ್ರಗಾಮಿ ಸಂಘಟನೆಗಳು ಈ ಪ್ರತಿಭಟನೆಗಳನ್ನು ಆಯೋಜಿಸುತ್ತಿವೆ ಎಂದು ಹೇಳಿಲ್ಲ ಎಂದಿದ್ದಾರೆ.

ಎನ್‌ಆರ್‌ಸಿ ಕುರಿತಂತೆ ಸಂಸತ್ತಿನಲ್ಲಿ ಹಾಗೂ ಸಂಸತ್ತಿನ ಹೊರಗಡೆ ವಿರೋದಾಭಾಸದ ಹೇಳಿಕೆ ನೀಡುತ್ತಿದ್ದಾರೆಂದು ಆರೋಪಿಸಿ ಕಳೆದ ವರ್ಷ ವಿಶ್ವಂ ಅವರು ಗೃಹಸಚಿವ ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News