ಬಿ.ಸಿ.ರೋಡ್: ರೈಲ್ವೇ ಸೇತುವೆಯಲ್ಲಿ ಮೃತದೇಹ ಪತ್ತೆ
Update: 2020-02-18 17:49 GMT
ಬಂಟ್ವಾಳ, ಫೆ.18: ಬಿ.ಸಿ.ರೋಡ್ ರೈಲ್ವೇ ಸೇತುವೆಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ತಾಲೂಕಿನ ಬಿ.ಮೂಡ ಗ್ರಾಮದ ಅಲೆತ್ತೂರು ನಿವಾಸಿ ಮೋಹನ್ ಶೆಟ್ಟಿ (37) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬಿ.ಸಿ.ರೋಡಿನ ನೇತ್ರಾವತಿ ನದಿಯ ರೈಲ್ವೇ ಸೇತುವೆಯ ಹಳಿಯ ಬದಿಯಲ್ಲಿ ಜನರು ನಡೆದಾಡಲು ಇರುವ ಜಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕ ರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಗರ ಠಾಣೆ ಪೊಲೀಸರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದ ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.
ಹಳಿಯ ಮೇಲೆ ನಡೆದುಕೊಂಡು ಹೋಗುವ ವೇಳೆ ರೈಲು ಢಿಕ್ಕಿಯಾಗಿ ಮೋಹನ್ ಶೆಟ್ಟಿ ಮೃತಪಟ್ಟಿದ್ದಾರಾ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬುದು ತನಿಖೆಯ ಬಳಿಕ ತಿಳಿದುಬರಬೇಕಿದೆ.