ಉಪ್ಪಿನಂಗಡಿ: ಮನೆಯಿಂದ ಚಿನ್ನಾಭರಣ ಕಳವು
Update: 2020-02-24 07:37 GMT
ಉಪ್ಪಿನಂಗಡಿ, ಫೆ.24: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನದ ಬೆಂಡೋಲೆಯೊಂದನ್ನು ಕಳವುಗೈದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಕೋಟೆಮನೆ ನಿವಾಸಿ ರಂಜಿನಿ ಎಂಬವರ ಮನೆಯ ಹಿಂಬದಿಯಲ್ಲಿ ಕಿಟಕಿಯ ಮೂಲಕ ಒಳ ನುಗ್ಗಿರುವ ಕಳ್ಳರು ಕಪಾಟಿನಲ್ಲಿರಿಸಿದ್ದ ಚಿನ್ನದ ಬೆಂಡೋಲೆಯೊಂದನ್ನು ಕಳವುಗೈದಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ರಂಜಿನಿ ಮನೆಗೆ ಬೀಗ ಹಾಕಿ ನೆಂಟರ ಮನೆಗೆ ಹೋಗಿದ್ದು, ಸೋಮವಾರ ಬೆಳಗ್ಗೆ ಮರಳಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಎಸ್ಸೈ ಈರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.