ಮಟ್ಟುಗುಳ್ಳ ಬೀಜ, ಮಣ್ಣಿನ ಗುಣದ ಬಗ್ಗೆ ಸಂಶೋಧನೆ ಅಗತ್ಯ: ಸೋದೆ ಸ್ವಾಮೀಜಿ

Update: 2020-02-27 16:49 GMT

ಉಡುಪಿ, ಫೆ.27: ಉಡುಪಿ ಜಿಲ್ಲೆಯ ವಿಭಿನ್ನ ಬೆಳೆಯಾಗಿರುವ ಮಟ್ಟುಗುಳ್ಳ ವನ್ನು ಮಟ್ಟು ಗ್ರಾಮದ ಭೂಮಿಯಲ್ಲಿ ಬೆಳೆದರೆ ಮಾತ್ರ ಅದರ ನಿಜವಾದ ರುಚಿ ದೊರೆಯಲು ಸಾಧ್ಯವಾಗುತ್ತದೆ. ಆದುದರಿಂದ ಮಟ್ಟು ಗ್ರಾಮದ ಮಣ್ಣಿನ ಗುಣ ಮತ್ತು ಮಟ್ಟುಗುಳ್ಳದ ಬೀಜದ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಮಾಡ ಬೇಕಾಗಿದೆ ಎಂದು ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಎಂಐಎಂ) ವತಿ ಯಿಂದ ರಾಜ್ಯ ಸರಕಾರದ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಷನ್ ಸೆಂಟರ್ ಇದರ ಸಹಯೋಗದೊಂದಿಗೆ ಗುರುವಾರ ಎಂಐಎಂ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ ಭೌಗೋಳಿಕ ಮಾನ್ಯತೆ ಪಡೆದ ಬೆಳೆಯಾಗಿರುವ ಮಟ್ಟು ಗುಳ್ಳದ ಭವಿಷ್ಯಕ್ಕಾಗಿ ರೂಪುರೇಷೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕಾರ್ಯ ತಂತ್ರದ ಕುರಿತ ಚರ್ಚಾ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.

ವಾದಿರಾಜ ಸ್ವಾಮೀಜಿ ಮಟ್ಟುಗುಳ್ಳವನ್ನು ಬಂಗಾಳದಿಂದ ತಂದು ಮಟ್ಟು ಗ್ರಾಮದಲ್ಲಿ ಬಿತ್ತಿದರು ಎಂಬ ಪ್ರತೀತಿ ಇದೆ. ಈ ತರಕಾರಿ ಬೆಳೆ ಇಂದು ಜಗತ್ತಿನ ಎಲ್ಲ ಕಡೆಗಳಲ್ಲಿ ಪಸರಿಸಿ ಮಟ್ಟುವಿನ ಹೆಸರನ್ನು ಎಲ್ಲ ಕಡೆ ಗುರುತಿಸುವಂತೆ ಮಾಡಿದೆ. ಜಗತ್ತಿನಲ್ಲೇ ವಿಭಿನ್ನವಾಗಿರುವ ಈ ತರಕಾರಿ ಬೆಳೆಯನ್ನು ಉಳಿಸಿ ಕೊಳ್ಳುವುದು ಉಡುಪಿಯ ಪ್ರತಿಯೊಬ್ಬರ ಕರ್ತವ್ಯ ಕೂಡ ಆಗಿದೆ ಎಂದರು.

ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ಕೃಷ್ಣರಾವ್ ಕೊಡಂಚ ಮಾತ ನಾಡಿ, ಬಡ ಮಟ್ಟು ಗ್ರಾಮವನ್ನು ಆರ್ಥಿಕವಾಗಿ ಮೇಲಕ್ಕೇತ್ತುವ ದೂರದೃಷ್ಠಿ ಯೊಂದಿಗೆ ವಾದಿರಾಜ ಸ್ವಾಮೀಜಿ ಗುಳ್ಳದ ಬೀಜವನ್ನು ಮಟ್ಟು ಗ್ರಾಮದಲ್ಲಿ ಬಿತ್ತಿದರು. ಸಮುದ್ರ ಮತ್ತು ನದಿಯ ಮಧ್ಯೆ ಇರುವ ಫಲವತ್ತಾದ ಮಟ್ಟು ಗ್ರಾಮದ ಭೂಮಿಯನ್ನು ಕೇವಲ ಮಟ್ಟುಗುಳ್ಳ ಬೆಳೆಗಾಗಿ ಮೀಸಲಿಡಬೇಕು. ಅಲ್ಲಿಂದ ಒಂದು ಇಂಚು ಭೂಮಿಯನ್ನು ಕೂಡ ಹಾಳು ಮಾಡಬಾರದು ಎಂದು ತಿಳಿಸಿದರು.

ಕೃಷಿಕರು ಇಂದು ಬಹಳ ಕಷ್ಟದ ಬದುಕು ನಡೆಸುತ್ತಿದ್ದಾರೆ. ಆದುದರಿಂದ ಕೃಷಿಯನ್ನು ಸರಕಾರ ಕೈಗಾರಿಕೆ ಎಂಬುದಾಗಿ ಘೋಷಿಸ ಬೇಕು. ಆ ಮೂಲಕ ಕೃಷಿಗೆ ಆದ್ಯತೆ ನೀಡಿ ಅಗತ್ಯ ನೆರವು ಕಲ್ಪಿಸಬೇಕು. ಇದರಿಂದ ಮಾತ್ರ ಕೃಷಿ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಾುತ್ತದೆ ಎಂದು ಅವರು ಹೇಳಿದರು.

ಮಟ್ಟುಗುಳ್ಳು ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಮಾತನಾಡಿದರು. ಎಂಐಎಂ ನಿರ್ದೇಶಕ ಡಾ.ರವೀಂದ್ರನಾಥ್ ನಾಯಕ್ ಸ್ವಾಗತಿಸಿದರು. ಸೆಂಟರ್ ಫಾರ್ ಸೋಶಿಯಲ್ ಎಂಟರ್‌ಪ್ರಿನರ್‌ಶಿಪ್‌ನ ಸಂಯೋಜಕ ಡಾ.ಹರೀಶ್ ಜಿ.ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸ್ವರ್ಣ್ ಜಿ.ಕಾಂಚನ್ ವಂದಿಸಿದರು.

ಮಟ್ಟುಗುಳ್ಳ ರಫ್ತು ಮಾಡಲು ಚಿಂತನೆ: ಬಂಗೇರ

ಮಾರುಕಟ್ಟೆಯಲ್ಲಿ ಮಟ್ಟುಗುಳ್ಳದ ಹೆಸರಿನಲ್ಲಿ ಬೇರೆ ಗುಳ್ಳಗಳನ್ನು ಮಾರಾಟ ಮಾಡುತ್ತಿರುವುದನ್ನು ತಡೆಯಲು ಇಂದು ಮಟ್ಟುಗುಳ್ಳ ಬೆಳೆಗಾರರ ಸಂಘ ಮಟ್ಟುಗುಳ್ಳಕ್ಕೆ ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡುತ್ತಿದೆ. ಇಂದು ಮಟ್ಟುಗುಳ್ಳ ವನ್ನು ಹೆಚ್ಚು ಬೆಳೆಸಲಾಗು ತ್ತಿದ್ದು, ಇಳುವರಿ ಕೂಡ ಹೆಚ್ಚಾಗಿದೆ. ಆದುದರಿಂದ ಇದನ್ನು ಮುಂದೆ ವಿದೇಶಗಳಿಗೆ ರಫ್ತು ಮಾಡುವ ಬಗ್ಗೆ ಕೂಡ ಚಿಂತನೆ ನಡೆಸ ಲಾಗುತ್ತಿದೆ ಎಂದು ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ತಿಳಿಸಿದರು.

ವಾರಕ್ಕೊಮ್ಮೆ ಮಟ್ಟುಗುಳ್ಳಕ್ಕೆ ದರ ನಿಗದಿ ಪಡಿಸಲಾಗುತ್ತಿದೆ. ಜಾಸ್ತಿ ಇಳುವರಿಯಾದಾಗ ಬೆಲೆ ಕೂಡ ಕಡಿಮೆ ಮಾಡಲಾಗುತ್ತಿದೆ. ಮುಂದೆ ಸ್ವಂತ ಜಾಗ ಖರೀದಿಸಿ, ಅದರಲ್ಲಿ ದಾಸ್ತಾನು ಕೇಂದ್ರವನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಹೀಗೆ ದಾಸ್ತಾನು ಕೇಂದ್ರದಲ್ಲಿ ಸುಮಾರು ಎರಡು ತಿಂಗಳು ಗಳ ಕಾಲ ಮಟ್ಟುಗುಳ್ಳವನ್ನು ದಾಸ್ತಾನು ಇರಿಸಬಹುದಾಗಿದೆ ಎಂದರು.

ಈಗ ಇರುವ ಸಂಘವನ್ನು ಸೊಸೈಟಿಯನ್ನಾಗಿಸುವ ಉದ್ದೇಶ ಕೂಡ ನಮ್ಮ ಮುಂದೆ ಇದೆ. ಈ ಮೂಲಕ ಮಟ್ಟುಗುಳ್ಳ ಬೆಳೆಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಕೂಡ ಹಾಕಿಕೊಳ್ಳಲಾಗುವುದು. ಇಂದು ಮಟ್ಟುಗುಳ್ಳ ಬೆಳೆಗೆ ರಾಸಾಯಿನಿಕ ಬದಲು ಸಾವಯವ ಗೊಬ್ಬರನ್ನು ಬಳಸಲಾಗುತ್ತಿದೆ. ಇದರಿಂದ ಮಟ್ಟುಗುಳ್ಳದ ರುಚಿಯನ್ನು ಹೆಚ್ಚಿಸಬಹುದಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News