ದಿಲ್ಲಿ ಹಿಂಸಾಚಾರ: ಸತ್ಯಶೋಧನಾ ಸಮಿತಿ ರೂಪಿಸಿದ ಕಾಂಗ್ರೆಸ್
Update: 2020-02-28 15:59 GMT
ಹೊಸದಿಲ್ಲಿ, ಫೆ. 29: ಈಶಾನ್ಯ ದಿಲ್ಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಐವರು ಸದಸ್ಯರ ತಂಡವೊಂದನ್ನು ರೂಪಿಸಿದ್ದಾರೆ.
ತಂಡ ಮುಕುಲ್ ವಾಸ್ನಿಕ್, ತಾರಿಕ್ ಅನ್ವರ್, ಸುಷ್ಮಿತಾ ದೇವ್, ಶಕ್ತಿಸಿನ್ಹ ಹಾಗೂ ಕುಮಾರಿ ಸೆಲ್ಜಾ ಅವರನ್ನು ಒಳಗೊಂಡಿದೆ. ಈ ತಂಡ ಹಿಂಸಾಚಾರ ಪೀಡಿತ ಪ್ರದೇಗಳಿಗೆ ಭೇಟಿ ನೀಡಲಿದೆ ಹಾಗೂ ವಿಸ್ತೃತ ವರದಿಯನ್ನು ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಲಿದೆ.
37 ಜನರ ಸಾವಿಗೆ ಹಾಗೂ 300ಕ್ಕೂ ಅಧಿಕ ಜನರು ಗಾಯಗೊಳ್ಳಲು ಕಾರಣವಾದ ಹಿಂಸಾಚಾರದ ಕುರಿತು ಕಾಂಗ್ರೆಸ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸೋನಿಯಾ ಗಾಂಧಿ ನೇತೃತ್ವದ ಪಕ್ಷದ ನಿಯೋಗ ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿತ್ತು. ಅಲ್ಲದೆ ಗೃಹ ಸಚಿವ ಅಮಿತ್ ಶಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಜ್ಞಾಪನಾ ಪತ್ರ ಸಲ್ಲಿಸಿತ್ತು.