ಘೋಷಣೆ ಕೂಗುತ್ತಾ ಬಂದ ಗುಂಪು ನನ್ನ ಮನೆಯನ್ನ ಸುಟ್ಟು ಹಾಕಿತು: ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕ
ಹೊಸದಿಲ್ಲಿ,ಮಾ.2: ಕಳೆದ ವಾರ ದಿಲ್ಲಿಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ ಗುಂಪುಗಳು ತನ್ನ ಮತ್ತು ತನ್ನ ಕೆಲವು ಸಂಬಂಧಿಗಳ ಮನೆಗಳನ್ನು ಸುಟ್ಟುಹಾಕಿವೆ ಎಂದು ಮುಸ್ಲಿಮ್ ಬಿಜೆಪಿ ನಾಯಕ ಅಖ್ತರ್ ರಝಾ ತಿಳಿಸಿದ್ದಾರೆ.
ಫೆ.25ರಂದು ಸಂಜೆ ತಾನು ವಾಸವಾಗಿರುವ ಭಗೀರಥ ವಿಹಾರ ಬಡಾವಣೆಯಲ್ಲಿ ಗುಂಪು ಸೇರಿದ್ದ ಜನರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲಿ ತನ್ನ ಮತ್ತು ತನ್ನ ಸಂಬಂಧಿಗಳು ಸೇರಿದಂತೆ ಮುಸ್ಲಿಮರಿಗೆ ಸೇರಿದ 19 ಮನೆಗಳಿದ್ದು,ಎಲ್ಲ ಮನೆಗಳಿಗೂ ಬೆಂಕಿ ಹಚ್ಚಲಾಗಿತ್ತು ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿರುವ ರಝಾ ತಿಳಿಸಿದರು.
ದಾಂಧಲೆಗಳನ್ನು ನಡೆಸಿದವರು ಸ್ಥಳೀಯರಾಗಿರಲಿಲ್ಲ ಎಂದ ಅವರು,ತಾವೆಲ್ಲ ಜೀವಭಯದಿಂದ ಪರಾರಿಯಾಗುತ್ತಿದ್ದಾಗ ಗುಂಪು ತಮ್ಮ ಮೇಲೆ ಕಲ್ಲುತೂರಾಟ ನಡೆಸಿತ್ತು. ಪೊಲೀಸ್ ನೆರವು ಕೋರಿದ್ದೆವಾದರೂ ಸಿಬ್ಬಂದಿ ಕೊರತೆಯ ಕಾರಣವನ್ನು ನೀಡಿದ್ದರು. ಪಕ್ಷದಿಂದ ತನಗೆ ಯಾವುದೇ ಫೋನ್ ಕರೆ ಅಥವಾ ಪರಿಹಾರದ ಭರವಸೆ ಬಂದಿಲ್ಲ,ಆದರೆ ನ್ಯಾಯ ದೊರಕಿಸುವ ಭರವಸೆಯನ್ನು ನೀಡಲಾಗಿದೆ ಎಂದರು.
ಕಳೆದ ಐದು ವರ್ಷಗಳಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ರಝಾ,ಈಗಲೂ ತಾನು ಪಕ್ಷದಲ್ಲಿದ್ದೇನೆ ಮತ್ತು ಪಕ್ಷದಲ್ಲಿಯೇ ಮಂದುವರಿಯಬಹುದು ಎಂದು ತಿಳಿಸಿದರು.