ಒಲಿಂಪಿಕ್ಸ್ ಮುಂದೂಡಿದರೆ ಉತ್ತಮ: ಗೋಪಿಚಂದ್

Update: 2020-03-19 18:01 GMT

ಹೊಸದಿಲ್ಲಿ, ಮಾ.19: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಇಡೀ ವಿಶ್ವ ಅಭೂತಪೂರ್ವ ಬಿಕ್ಕಟ್ಟು ಎದುರಿಸುತ್ತಿದ್ದು, ಟೋಕಿಯೊ ಒಲಿಂಪಿಕ್ ನ್ನು ಮುಂದೂಡಲೇ ಬೇಕು ಎಂದು ಭಾರತದ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೆಲ ಗೋಪಿಚಂದ್ ಆಗ್ರಹಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಜುಲೈ 24ರಿಂದ ಆಗಸ್ಟ್ 9ರ ತನಕ ನಿಗದಿಯಾಗಿದ್ದು, ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಪ್ರಮುಖ ಕ್ರೀಡಾ ಸ್ಪರ್ಧೆಗಳು ರದ್ದು ಇಲ್ಲವೇ ಮುಂದೂಡಲ್ಪಟ್ಟಿವೆ. ಕೊರೋನ ವೈರಸ್‌ಗೆ ವಿಶ್ವದಲ್ಲಿ 8,000ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 2 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ದೃಢಪಟ್ಟಿದೆ.

ಒಲಿಂಪಿಕ್ ಗೇಮ್ಸ್ ವೇಳಾಪಟ್ಟಿಯ ಪ್ರಕಾರವೇ ನಡೆಯುವ ನಿರೀಕ್ಷೆಯಲ್ಲಿರುವುದಾಗಿ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ಬುಧವಾರ ತಿಳಿಸಿದೆ.

‘‘ಒಲಿಂಪಿಕ್ಸ್ ಕುರಿತು ನನಗೆ ಅನುಮಾನವಿದೆ. ತಯಾರಿ ಈಗಲೇ ಆರಂಭವಾಗಬೇಕಾಗಿದೆ. ಪ್ರತಿಯೊಬ್ಬರು ನಿರಾಳವಾಗಲು ಐಒಸಿ ಶೀಘ್ರವೇ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯ ಭೀತಿ ಎದುರಾಗಿದ್ದು, ಎಲ್ಲ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಇಡೀ ವಿಶ್ವವೇ ತನ್ನ ನಾಗರಿಕರ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಚಿಂತಿತವಾಗಿದ್ದು ಇದೊಂದು ಕಠಿಣ ಸಮಯ. ಈಗಿನ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್‌ನ್ನು ಮುಂದೂಡುವುದೇ ಉತ್ತಮ ಆಯ್ಕೆ’’ ಎಂದು ಗೋಪಿಚಂದ್ ಹೇಳಿದ್ದಾರೆ.

ಕೊರೋನ ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವ ಹೊರತಾಗಿಯೂ ಈ ತಿಂಗಳಾರಂಭದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ್ನು ಆಯೋಜಿಸಿರುವ ವಿಶ್ವ ಬ್ಯಾಡ್ಮಿಂಟನ್ ಸಂಘಟನೆ ತೀವ್ರ ಟೀಕೆಗೆ ಒಳಗಾಗಿತ್ತು. ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಸಹಿತ ಹಲವು ಅಂತರ್‌ರಾಷ್ಟ್ರೀಯ ಆಟಗಾರರು ಫೆಡರೇಶನ್‌ನ ನಡೆಯನ್ನು ಟೀಕಿಸಿದ್ದರು. ಹಣ ಗಳಿಕೆಯ ಉದ್ದೇಶದಿಂದ ಆಟಗಾರರ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ ಎಂದು ಸೈನಾ ಆರೋಪಿಸಿದ್ದರು. ‘‘ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಆತಿಥ್ಯವಹಿಸಿಕೊಳ್ಳುವ ಮೂಲಕ ಆಟಗಾರರನ್ನು ಅಪಾಯಕ್ಕೆ ತಳ್ಳಿದ್ದ ಬಿಡಬ್ಲುಎಫ್‌ನ ನಿರ್ಧಾರ ನನ್ನ ಪ್ರಕಾರ ಖಂಡಿತವಾಗಿಯೂ ತಪ್ಪು’’ ಎಂದು ಬರ್ಮಿಂಗ್‌ಹ್ಯಾಮ್‌ನಿಂದ ವಾಪಸಾದ ಬಳಿಕ ಸ್ವಯಂ ಪ್ರತ್ಯೇಕವಾಗಿರುವ ಗೋಪಿಚಂದ್ ಹೇಳಿದ್ದಾರೆ.

ಹಲವು ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳು ಮುಂದೂಡಿಕೆಯಾಗಿರುವ ಕಾರಣ ಎಪ್ರಿಲ್ 28ಕ್ಕೆ ಅಂತ್ಯವಾಗಲಿರುವ ಒಲಿಂಪಿಕ್ಸ್ ಅರ್ಹತಾ ಅವಧಿಯನ್ನು ಮುಂದೂಡಬೇಕೆಂಬ ಬೇಡಿಕೆಯು ಕೇಳಿಬಂದಿದೆ. ‘‘ಬಿಡಬ್ಲುಎಫ್ ಸಂಕಷ್ಟದ ಸ್ಥಿತಿಯಲ್ಲಿದೆ. ಯಾವುದೇ ನಿರ್ಧಾರ ಕೈಗೊಂಡರೂ ಅದು ಟೀಕೆಗೆ ಗುರಿಯಾಗುತ್ತದೆ. ಒಲಿಂಪಿಕ್ಸ್(ಅರ್ಹತೆ)ಸಮಯ ವಿಸ್ತರಣೆ ಮಾಡಿದರೆ ವಸತಿ, ವೀಸಾಗಳು, ಸಹಾಯಕ ತಂಡಗಳು, ಸ್ಥಳೀಯ ಸಂಸ್ಥೆಗಳು ಸಹಿತ ಹಲವು ವಿಚಾರಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಇವೆಲ್ಲವೂ ಸುಲಭ ಸಾಧ್ಯವಲ್ಲ. ಇದೊಂದು ಅಭೂತಪೂರ್ವ ಪರಿಸ್ಥಿತಿ. ಫೆಡರೇಶನ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವು ಪಾಲಿಸಬೇಕಾಗುತ್ತದೆ’’ ಎಂದರು.

ತೆಲಂಗಾಣ ಸರಕಾರದ ನಿರ್ದೇಶನದ ಮೇರೆಗೆ ಹೈದರಾಬಾದ್‌ನಲ್ಲಿರುವ ಸಾಯ್-ಗೋಪಿಚಂದ್ ಅಕಾಡಮಿಯನ್ನು ಮಾರ್ಚ್ 31ರ ತನಕ ಮುಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News