ಕೇರಳ ಮಾದರಿಯಲ್ಲಿ ಕ್ರಮಕೈಗೊಳ್ಳಲು ಡಿವೈಎಫ್‌ಐ ಆಗ್ರಹ

Update: 2020-03-24 15:20 GMT

ಮೂಡುಬಿದಿರೆ, ಮಾ.24: ಕೊರೋನ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಸಾಮಾನ್ಯರು ಭಯ ಭೀತರಾಗಿದ್ದಾರೆ. ಹಾಗಾಗಿ ಸರಕಾರವು ಕೇರಳ ಮಾದರಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಡಿವೈಎಫ್‌ಐ ಮೂಡುಬಿದಿರೆ ತಾಲೂಕು ಸಮಿತಿ ಆಗ್ರಹಿಸಿದೆ.

ಕೇರಳ ಸರಕಾರವು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ .ವಿಶೇಷವಾಗಿ ನೆಗಡಿ, ಜ್ವರ, ಕೆಮ್ಮು ಇತ್ಯಾದಿ ಲಕ್ಷಣಗಳಿರುವವರನ್ನು ಪರೀಕ್ಷಿಸಲು ಸಾಧ್ಯವಾಗುವಂತೆ ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಬೇಕು.ಉಚಿತ ತಪಾಸಣೆ ನಡೆಸಲು, ಆಸ್ಪತ್ರೆಗಳಲ್ಲಿ ಸೌಲಭ್ಯಗಳು, ಆರೈಕೆ ಕೇಂದ್ರಗಳ ಮತ್ತು ವೆಂಟಿಲೇಟರ್‌ಗಳನ್ನು ಒದಗಿಸಲು ಸಾಧ್ಯವಾಗುವಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ಧನ ಸಹಾಯವನ್ನು ಪ್ರಕಟಿಸಬೇಕು. ಜನಧನ್ ಖಾತೆ ಮತ್ತು ಬಿಪಿಎಲ್ ಫಲಾನುಭವಿಗಳಿಗೆ 5,000 ರೂ.ನಗದು ವರ್ಗಾವಣೆ ಮಾಡಬೇಕು. ಎಲ್ಲ ಬಿಪಿಎಲ್/ಎಪಿಎಲ್ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ 1 ತಿಂಗಳ ಉಚಿತ ರೇಶನ್ ಕೊಡಬೇಕು, ಇದಕ್ಕೆ ಎಫ್‌ಸಿಐ ಗೋದಾಮುಗಳಲ್ಲಿರುವ 7.5 ಕೋಟಿ ಟನ್‌ಗಳ ಅಗಾಧ ದಾಸ್ತಾನನ್ನು ಬಳಸಬೇಕು. ಎಲ್ಲ ಅಗತ್ಯ ಸರಕುಗಳನ್ನು ಒಳಗೊಳ್ಳುವಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದೆ.

ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯ ಬದಲು, ರೇಶನ್ ಕಿಟ್‌ಗಳನ್ನು ಮಕ್ಕಳ ಮನೆಗಳಿಗೆ/ಕುಟುಂಬಗಳಿಗೆ ಒದಗಿಸಬೇಕು. ಅನೌಪಚಾರಿಕ ಮತ್ತು ಅಸಂಘಟಿತ ವಲಯಗಳಲ್ಲಿ ಜೀವನಾಧಾರಗಳಿಗೆ ತೊಂದರೆಯಾಗಿರುವ ಎಲ್ಲ ಕಾರ್ಮಿಕರಿಗೆ ಹಣಕಾಸು ನೆರವು/ಭತ್ತೆಯನ್ನು ನೀಡಲು ನಿಧಿಯನ್ನು ಸ್ಥಾಪಿಸಬೇಕು. ಕೊರೊನ ವೈರಸ್‌ನಿಂದಾಗಿ ಕೆಲಸದಿಂದ ದೂರವಿರಬೇಕಾದ ಕಾರ್ಮಿಕರು ಮತ್ತು ನೌಕರರಿಗೆ ಸಂಬಳ ಸಹಿತ ಕಾಯಿಲೆ ರಜಾ ನೀಡಬೇಕು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಬ್ಯಾಂಕು ಸಾಲಗಳ ಮರುಪಾವತಿಯಲ್ಲಿ ಒಂದು ವರ್ಷದ ಋಣ ವಿಳಂಬದ ಸೌಲಭ್ಯವನ್ನು ನೀಡಬೇಕು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ ಕೈ ತೊಳೆಯುವ ಕೆಂದ್ರಗಳನ್ನು ಸ್ಥಾಪಿಸಲು ಸ್ಥಳಿಯಾಡಳಿತಗಳು ಕ್ರಮಕೈಗೊಳ್ಳಬೇಕೆಂದು ಡಿವೈಎಫ್‌ಐ ಮೂಡುಬಿದಿರೆ ತಾಲೂಕು ಸಮಿತಿಯ ಅಧ್ಯಕ್ಷ ಸದಾನಂದ ಪೂಜಾರಿ ಮತ್ತು ಕಾರ್ಯದರ್ಶಿ ರಿಯಾಝ್ ಮಾಂತೂರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News