ಆಹಾರ ಪೂರೈಸಲು ಯುನಿವೆಫ್ ಕರ್ನಾಟಕ ಆಗ್ರಹ
Update: 2020-03-24 15:22 GMT
ಮಂಗಳೂರು, ಮಾ.24: ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಮೂರು ಹೊತ್ತಿನ ಆಹಾರ ವಿತರಿಸುವ ಸರಕಾರದ ಕ್ರಮ ಸ್ವಾಗತಾರ್ಹ. ಅದರ ಜತೆ ರಾಜ್ಯ ಸರಕಾರವು ಕೇರಳದ ಮಾದರಿಯನ್ನು ಅನುಸರಿಸಬೇಕು ಮತ್ತು ಬಡ ಜನರಿಗೆ ಬೇಕಾಗುವ ದೈನಂದಿನ ಆಹಾರ ಪದಾರ್ಥ ಗಳನ್ನು ಪೂರೈಕೆಯ ವ್ಯವಸ್ಥೆಯನ್ನು ಆರಂಭಿಸಬೇಕು ಎಂದು ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಆಗ್ರಹಿಸಿದ್ದಾರೆ.
ಪ್ರತಿಯೊಂದು ಬಿಪಿಎಲ್ ಮತ್ತು ಎಪಿಎಲ್ ಕುಟುಂಬಕ್ಕೆ ಆಹಾರ ಸಾಮಗ್ರಿಗಳು ದೊರಕುವಂತೆ ಕ್ರಮಕೈಗೊಳ್ಳಬೇಕು. ಜಿಲ್ಲಾಡಳಿತದ ಮೂಲಕ ಈ ಕಾರ್ಯವನ್ನು ಶೀಘ್ರವೇ ಆರಂಭಿಸಬೇಕು. ನಗರ ಪ್ರದೇಶಗಳಲ್ಲಿ ಅನೇಕ ಸಂಘಸಂಸ್ಥೆಗಳು ಈ ಕೆಲಸವನ್ನು ಆರಂಭಿಸಿದ್ದು ಗ್ರಾಮಾಂತರ ಪ್ರದೇಶ ಹಾಗು ಹಳ್ಳಿಗಳಲ್ಲಿ ಮೂರು ಹೊತ್ತಿನ ಆಹಾರಕ್ಕಾಗಿ ಪರಿತಪಿಸುವ ಪರಿಸ್ಥಿತಿ ಇದೆ. ಸರಕಾರ ತನ್ನ ವಿಶೇಷ ಕೊಡುಗೆಯ ಮೂಲಕ ಆಹಾರ ಸಾಮಗ್ರಿಗಳ ಪೂರೈಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.