ಉಡುಪಿ: ಕೊರೋನ ವೈರಸ್ ಕುರಿತು ಜನಜಾಗೃತಿಗೆ ಚಾಲನೆ
ಉಡುಪಿ, ಮಾ.28: ಉಡುಪಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಉಡುಪಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಕೊರೋನ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಇಂದು ಉಡುಪಿ ತಾಲೂಕು ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.
ಈ ಸಂಬಂಧ ಸುಮಾರು 20 ವಾಹನಗಳು ವಿವಿಧ ಪ್ರದೇಶಗಳಿಗೆ ಸಂಚರಿಸಿ ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಿ ಜನರಿಗೆ ಕೊರೋನ ವೈರಸ್ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಈ ಸಂದರ್ಭದಲ್ಲಿ ಧ್ವನಿ ಬೆಳಕು ಸಂಘಟನೆಯ ಅಧ್ಯಕ್ಷ ಶಿವರಾಜ್ ಮಲ್ಲಾರು, ಪ್ರಧಾನ ಕಾರ್ಯದರ್ಶಿ ದಾಮೋದರ್, ಉಡುಪಿ ತಾಲೂಕು ಅಧ್ಯಕ್ಷ ರಾಧಾಕೃಷ್ಣ, ಹಿರಿಯ ಆರೋಗ್ಯ ಸಹಾಯಕ ಸತೀಶ್ ರಾವ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರೀತಂ ಬಿ.ಎಸ್., ಜಿಲ್ಲಾ ಲೆಕ್ಕ ಪತ್ರ ವ್ಯವಸ್ಥಾಪಕರಾದ ಗಿರೀಶ್, ಕಂದಾಯ ಇಲಾಖೆಯ ಕಂದಾಯ ನಿರೀಕ್ಷ ವಿಶ್ವನಾಥ್ ಎಚ್.ಎನ್. ಹಾಗೂ ಸಮಾಜ ಸೇವಕ ಸುದೇಶ್ ಶೇಟ್ ಉಪಸ್ಥಿತರಿದ್ದರು.