ಚಿಕ್ಕಪ್ಪನ ಅಂತ್ಯಕ್ರಿಯೆಗೆ ಜನ ಸೇರದಂತೆ ಮನವಿ: ಉಮರ್ ಅಬ್ದುಲ್ಲಾ ಟ್ವೀಟ್ ಗೆ ಪ್ರಧಾನಿ ಪ್ರತಿಕ್ರಿಯಿಸಿದ್ದು ಹೀಗೆ
ಹೊಸದಿಲ್ಲಿ: ಕಳೆದ ರಾತ್ರಿ ಟ್ವೀಟ್ ಒಂದರ ಮೂಲಕ ತಮ್ಮ ಚಿಕ್ಕಪ್ಪನ ಸಾವಿನ ಕುರಿತು ಮಾಹಿತಿ ನೀಡಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ, ಲಾಕ್ ಡೌನ್ ನಿಯಮಗಳನ್ನು ಪಾಲಿಸುವ ಸಲುವಾಗಿ ಎಲ್ಲಾ ಸಂಬಂಧಿಗಳು ಹಾಗೂ ಹಿತೈಷಿಗಳಿಗೆ ಮೃತರ ಮನೆಗೆ ಭೇಟಿ ನೀಡದಂತೆ ಹಾಗೂ ದಫನಭೂಮಿಗೆ ಆಗಮಿಸದಂತೆ ವಿನಂತಿಸಿದ್ದರು. ಉಮರ್ ಅಬ್ದುಲ್ಲಾ ಅವರ ಈ ವಿನಂತಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಲ್ಪಕಾಲದ ಅಸೌಖ್ಯದಿಂದಾಗಿ ತಮ್ಮ ಚಿಕ್ಕಪ್ಪ ಡಾ. ಮುಹಮ್ಮದ್ ಅಲಿ ಮಟ್ಟೂ ನಿಧನರಾಗಿದ್ದಾರೆಂದು ಉಮರ್ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಉಮರ್ ಕುಟುಂಬಕ್ಕೆ ತಮ್ಮ ಸಂತಾಪ ಸೂಚಿಸುವುದರ ಜತೆಗೆ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ``ಇಂತಹ ಒಂದು ಸಂದರ್ಭದಲ್ಲೂ ಜನರು ಸೇರದಂತೆ ನೀವು ಮಾಡಿರುವ ಮನವಿಯನ್ನು ಶ್ಲಾಘಿಸುತ್ತೇನೆ'' ಎಂದು ಬರೆದಿದ್ದಾರೆ.
ಪ್ರಧಾನಿಯ ಈ ಟ್ವೀಟ್ ಗೆ ಉಮರ್ ಅಬ್ದುಲ್ಲಾ ಧನ್ಯವಾದ ತಿಳಿಸಿ ಇನ್ನೊಂದು ಟ್ವೀಟ್ ಮಾಡಿದ್ದಾರೆ.